ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಭವ್ಯ ಸ್ವಾಗತ
- sathyapathanewsplu
- Nov 5
- 1 min read

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಭವ್ಯ ಬೆಳ್ಳಿರಥವು ಇಂದು (ನ. 5) ಕುಕ್ಕೆ ಕ್ಷೇತ್ರಕ್ಕೆ ಪುರಪ್ರವೇಶ ಮಾಡಲಿದೆ. ಕುರುಂಜಿಯ ಡಾ. ಕೆ.ವಿ. ರೇಣುಕಾಪ್ರಸಾದ್ ಮತ್ತು ಕುಟುಂಬದವರಿಂದ ಸಮರ್ಪಣೆಯಾಗಲಿರುವ ಈ ರಥವು ಕೋಟೇಶ್ವರದಿಂದ ಹೊರಟು ಮಂಗಳವಾರ ರಾತ್ರಿ ಸುಳ್ಯ ತಲುಪಿದ್ದು, ಅಲ್ಲಿ ರಥಕ್ಕೆ ಭಕ್ತರು ಅದ್ದೂರಿ ಸ್ವಾಗತ ನೀಡಿದ್ದಾರೆ. ಸುಳ್ಯದಲ್ಲಿ ರಾತ್ರಿ ವಾಸ್ತವ್ಯ ಹೂಡಿದ ರಥವು ಇಂದು ಬೆಳಗ್ಗೆ ಸುಳ್ಯದಿಂದ ಸುಬ್ರಹ್ಮಣ್ಯದತ್ತ ಪ್ರಯಾಣ ಮುಂದುವರಿಸಲಿದೆ.
ಬೆಳ್ಳಿರಥವು ಇಂದು ಸುಳ್ಯದ ಕಾಂತಮಂಗಲದಿಂದ ಹೊರಟು ಸುಳ್ಯ, ಪೈಚಾರು, ಸೋಣಂಗೇರಿ, ದುಗ್ಗಲಡ್ಕ, ಎಲಿಮಲೆ, ಮಾವಿನಕಟ್ಟೆ ಮಾರ್ಗವಾಗಿ ಸಾಗಲಿದೆ. ಮಧ್ಯಾಹ್ನ 1 ಗಂಟೆಗೆ ರಥವು ವಳಲಂಬೆಯಲ್ಲಿರುವ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನವನ್ನು ತಲುಪಲಿದೆ. ಅಲ್ಲಿ ರಥಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಬಳಿಕ ಬೆಳ್ಳಿರಥವು ಕುಕ್ಕೆ ಸುಬ್ರಹ್ಮಣ್ಯದತ್ತ ಪ್ರಯಾಣ ಬೆಳೆಸಲಿದೆ. ದಾರಿಯುದ್ದಕ್ಕೂ ಭಕ್ತರು ರಥವನ್ನು ಕಣ್ಣು ತುಂಬಿಕೊಳ್ಳಲು ಕಾತುರರಾಗಿದ್ದು, ಭವ್ಯ ಸ್ವಾಗತ ನೀಡಲು ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.
ದೇವಳದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಲಿರುವ ಈ ಬೆಳ್ಳಿರಥವು ನವೆಂಬರ್ 10, ಸೋಮವಾರದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಧ್ಯುಕ್ತವಾಗಿ ಸಮರ್ಪಣೆಯಾಗಲಿದೆ. ಈ ಶುಭ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ರಥದಾನಿಗಳು ಭಕ್ತ ಸಮೂಹದಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಬೆಳ್ಳಿರಥದ ಆಗಮನವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ.
For Advertisement Contact:
Would you like to promote your business, service, or product on our sathyapatha news plus website?
Please contact for advertisements: 9880834166 / WhatsApp






Comments