ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವದ ಅಂಗವಾಗಿ ಕ್ರೀಡಾಕೂಟ
- 2 days ago
- 1 min read
ಕಾಣಿಯೂರು, ಫೆ.15: ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟವು ಭಕ್ತಿ ಮತ್ತು ಉತ್ಸಾಹದ ನಡುವೆ ಸಡಗರದಿಂದ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಂದೂರು ಅಶ್ವತ್ಥ ವಿವಾಹ ಮಹೋತ್ಸವ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಮುಂಡಾಳ ಅವರು, “ಆಡಂಬರದ ಭಕ್ತಿಗಿಂತ ಪರಿಶುದ್ಧವಾದ ಭಕ್ತಿಯೇ ಶ್ರೇಷ್ಠ. ದೇವರಿಗೆ ಮಾಡುವ ವೈಭವಕ್ಕಿಂತ ಮನಸ್ಸಿನ ನಿಷ್ಕಲ್ಮಶ ಭಕ್ತಿ ಮತ್ತು ಶ್ರದ್ದೆಯೇ ಮುಖ್ಯ” ಎಂದು ತಿಳಿಸಿದರು. ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ವೃದ್ಧಿ ಸಾಧ್ಯವಾಗುತ್ತದೆ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ; ಶ್ರಮ ಮತ್ತು ನಿಯಮಿತ ಅಭ್ಯಾಸದಿಂದಲೇ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ಗರಡಿ ಆಡಳಿತ ಸಮಿತಿ ಅಧ್ಯಕ್ಷ ಬಿ.ಎ. ವಸಂತ ಪೂಜಾರಿ ಅವರು, ಕ್ರೀಡಾಕೂಟಗಳ ಯಶಸ್ಸಿಗೆ ಜನರ ಸಹಕಾರ ಅತ್ಯವಶ್ಯಕ. ಎಲ್ಲರ ಸಹಕಾರದಿಂದ ಗರಡಿಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಮುಂದೆಯೂ ಇದೇ ರೀತಿಯ ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ರೈ, ಕೆಲಂಬೀರಿ ಕೋಟಿ ಚೆನ್ನಯ ಕರಸೇವಾ ಸಮಿತಿ ಅಧ್ಯಕ್ಷ ಕುಶಾಲಪ್ಪ, ಯುವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ರತನ್ ರೈ ಕಾರ್ಲಾಡಿ, ಗರಡಿ ಮೊತ್ತೇಸರ ಬಾಬು ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸದಾನಂದ ಸೌತೆಮಾರು, ಜನಾರ್ದನ ಪೂಜಾರಿ, ಸತೀಶ್ ಮಾರ್ಕಾಜೆ, ಚೇತನ್ ಪಾಲೆತ್ತಡಿ, ರಾಮಕೃಷ್ಣ ಮರಕ್ಕಡ ಹಾಗೂ ಚಂದ್ರಶೇಖರ ಅವರು ಅತಿಥಿಗಳನ್ನು ಗೌರವಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಕುದ್ದಾರು ತೀರ್ಪುಗಾರರಾಗಿ ಸಹಕರಿಸಿದರು. ಆಡಳಿತ ಸಮಿತಿ ಸದಸ್ಯ ಸತೀಶ್ ಮಾರ್ಕಜೆ ಸ್ವಾಗತಿಸಿ, ಕಾರ್ಯದರ್ಶಿ ಸದಾನಂದ ಎಸ್. ಸೌತೆಮಾರು ವಂದಿಸಿದರು. ಕಾರ್ಯದರ್ಶಿ ಸಚಿನ್ ಸೌತೆಮಾರ್ ಕಾರ್ಯಕ್ರಮ ನಿರೂಪಿಸಿದರು.
ನಂತರ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು. ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.








Comments