ನಿಂತಿಕಲ್ಲು: ಹೃದಯಾಘಾತದಿಂದ ೯ನೇ ತರಗತಿ ವಿದ್ಯಾರ್ಥಿ, ಯಕ್ಷಗಾನ ಕಲಾವಿದ ಶಿಶಿಲ್ ನಿಧನ

ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕರಿಂಬಿಲದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಎಣ್ಮೂರು ಹೈಸ್ಕೂಲಿನ ೯ನೇ ತರಗತಿ ವಿದ್ಯಾರ್ಥಿಯಾಗಿದ್ದ ಶಿಶಿಲ್ (೧೪) ಎಂಬ ಬಾಲಕ ಭಾನುವಾರ ತಡರಾತ್ರಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮೃತ ಬಾಲಕ ಇಲ್ಲಿನ ನಿವಾಸಿ ಪೂರ್ಣಚಂದ್ರ ಅವರ ಪುತ್ರನಾಗಿದ್ದಾನೆ.
ಕಳೆದ ಕೆಲವು ದಿನಗಳಿಂದ ತೀವ್ರ ಅಸೌಖ್ಯದಿಂದ ಬಳಲುತ್ತಿದ್ದ ಶಿಶಿಲ್ನನ್ನು ಕಾಣಿಯೂರು, ಪುತ್ತೂರು ಹಾಗೂ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಜುಲೈ ೬ರಂದು ಬೆಂಗಳೂರಿಗೆ ಕರೆದೊಯ್ಯಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಜುಲೈ ೫ರ ರಾತ್ರಿ ಇದ್ದಕ್ಕಿದ್ದಂತೆ ಸ್ಥಿತಿ ಬಿಗಡಾಯಿಸಿದ್ದು, ಪುತ್ತೂರಿಗೆ ಸಾಗಿಸುವ ದಾರಿ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ.
ಮೃತ ಶಿಶಿಲ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಯಕ್ಷಗಾನ ಹಾಗೂ ನಾಟಕ ರಂಗದಲ್ಲಿ ಬಾಲ ಕಲಾವಿದನಾಗಿ ಗುರುತಿಸಿಕೊಂಡಿದ್ದನು. ಸದ್ಯ ಈತ ತಂದೆ, ತಾಯಿ ಕವಿತಾ, ಸಹೋದರ ಗಾಯನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಬಾಲಕನ ಅಕಾಲಿಕ ಮರಣದಿಂದ ಇಡೀ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದೆ.







Comments