ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಪಿಯು ಉಪನ್ಯಾಸಕರಾಗಿ ಮುಂಬಡ್ತಿ: ಅರ್ಜಿ ಸಲ್ಲಿಸಲು ಜ. 31ರವರೆಗೆ ಕಾಲಾವಕಾಶ ವಿಸ್ತರಣೆ
- sathyapathanewsplu
- 4 days ago
- 1 min read

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ಪಡೆಯಲು ನಡೆಸುವ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಶಾಲಾ ಶಿಕ್ಷಣ ಇಲಾಖೆ ವಿಸ್ತರಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಮೊದಲು ಜನೆವರಿ 28ರವರೆಗೆ ನೀಡಲಾಗಿದ್ದ ಗಡುವನ್ನು ಇದೀಗ ಜನೆವರಿ 31ರವರೆಗೆ ಹೆಚ್ಚಿಸಲಾಗಿದೆ. ಈ ನಿರ್ಧಾರವು ಮುಂಬಡ್ತಿಯ ನಿರೀಕ್ಷೆಯಲ್ಲಿದ್ದ ಸಾವಿರಾರು ಅರ್ಹ ಶಿಕ್ಷಕರಿಗೆ ದೊಡ್ಡ ಸಮಾಧಾನ ತಂದಿದೆ.
ಇಲಾಖೆಯ ಈ ನೂತನ ಆದೇಶದ ಪ್ರಕಾರ, ಕೇವಲ ಜೇಷ್ಠತಾ ಪಟ್ಟಿಯಲ್ಲಿ ಹೆಸರಿರುವವರು ಮಾತ್ರವಲ್ಲದೆ, ನಿಯಮಾನುಸಾರ ಅರ್ಹತೆ ಹೊಂದಿದ್ದು ಪಟ್ಟಿಯಲ್ಲಿ ಹೆಸರಿಲ್ಲದ ಶಿಕ್ಷಕರಿಗೂ ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೆ.ಜಿ.ಐ.ಡಿ. (KGID) ಸಂಖ್ಯೆಯ ನಮೂದಿಸುವಿಕೆಯಲ್ಲಿ ತಂತ್ರಾಂಶದಲ್ಲಿ ಸಡಿಲಿಕೆ ಮಾಡಲಾಗಿದ್ದು, ಸಹ ಶಿಕ್ಷಕರು ನೇರವಾಗಿ ತಮ್ಮ ಸಂಖ್ಯೆಯನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದಾಗಿ ಸ್ನಾತಕೋತ್ತರ ಪದವಿ ಹೊಂದಿರುವ ಹಾಗೂ ಮುಂಬಡ್ತಿಗೆ ಅರ್ಹರಿರುವ ಹೆಚ್ಚಿನ ಶಿಕ್ಷಕರು ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಹಾದಿ ಸುಗಮವಾಗಿದೆ.
ಮೂಲತಃ 2025ರ ಡಿಸೆಂಬರ್ 29ರಿಂದ ಜನೆವರಿ 28ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಆದರೆ, ಜೇಷ್ಠತಾ ಪಟ್ಟಿಯಲ್ಲಿ ಹೆಸರಿಲ್ಲದ ಕೆಲವು ಅರ್ಹ ಶಿಕ್ಷಕರು ತಮಗೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಇಲಾಖೆಯನ್ನು ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಕೇಂದ್ರೀಕೃತ ದಾಖಲೆಗಳ ಘಟಕದ ಜಂಟಿ ನಿರ್ದೇಶಕರು, ಅರ್ಹರಿರುವ ಪ್ರತಿಯೊಬ್ಬ ಶಿಕ್ಷಕರೂ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Comments