ಪತಿಯನ್ನು ಕೊಂದು, ಮಗನ ಜೀವಕ್ಕೆ ಕುತ್ತು ತಂದ ವೈದ್ಯೆ!
- 11 minutes ago
- 1 min read

ಧಾರವಾಡದ ಬಾರಾಕೊಟ್ರಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಅರವಳಿಕೆ ತಜ್ಞ ಡಾ.ಕಿರಣ್ ಹೊನ್ನಣ್ಣವರ (45) ಎಂಬುವವರ ಭೀಕರ ಕೊಲೆಯಾಗಿದೆ. ಅವರ 8 ವರ್ಷದ ಬುದ್ಧಿಮಾಂದ್ಯ ಪುತ್ರ ನಿಹಿತ್ ಮೇಲೂ ಚಾಕು ದಾಳಿ ನಡೆದಿದ್ದು, ಮಗು ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಈ ಘೋರ ಕೃತ್ಯದ ಹಿಂದೆ ಸ್ವತಃ ಕಿರಣ್ ಪತ್ನಿ, ವೃತ್ತಿಯಿಂದ ವೈದ್ಯೆಯಾಗಿರುವ ಪ್ರಿಯಾಂಕಾ ಇದ್ದಾಳೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಾತ್ರಿ ಪತಿ ಮತ್ತು ಮಗ ಮಲಗಿದ್ದಾಗ ಪ್ರಿಯಾಂಕಾ ಚಾಕುವಿನಿಂದ ದಾಳಿ ನಡೆಸಿದ್ದಾಳೆ. ಪತಿಯನ್ನು ಕೊಲೆ ಮಾಡಿ, ಶವದ ಪಕ್ಕದಲ್ಲೇ ರಾತ್ರಿಯಿಡೀ ಕುಳಿತಿದ್ದಾಳೆ. ಮಗ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಆಕೆ ಬೆಡ್ ಮೇಲೆ ಮೊಬೈಲ್ ನೋಡುತ್ತಾ ಕಾಲ ಕಳೆದಿದ್ದಾಳೆ. ಯಾರೇ ಫೋನ್ ಮಾಡಿದರೂ ಪತಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಸಬೂಬು ಹೇಳಿ ವಂಚಿಸಿದ್ದಾಳೆ.
ಬುಧವಾರ ಮಧ್ಯಾಹ್ನದವರೆಗೂ ಕಿರಣ್ ಫೋನ್ ಸಿಗದಿದ್ದಾಗ ಸಂಶಯಗೊಂಡ ಸಂಬಂಧಿಕರು ಪೊಲೀಸರೊಂದಿಗೆ ಬಂದು ಕದ ತೆರೆದಾಗ ಈ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್ ಅವರೇ ಸ್ವತಃ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಪ್ರಿಯಾಂಕಾಳನ್ನು ವಶಕ್ಕೆ ಪಡೆದಿರುವ ಉಪನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.







Comments