ಕಡಬ: ಮತಾಂತರ ವದಂತಿಗೆ ತೆರೆ ಎಳೆದ ಪೊಲೀಸರು
- May 9
- 1 min read

ಕಡಬ: ತಾಲೂಕಿನ ಐತೂರು ಗ್ರಾಮದ ಕೆರ್ಮಾಯಿಯ ಮನೆಯೊಂದರಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳೆಯರು ಮತ್ತು ಮಕ್ಕಳನ್ನು ಸೇರಿಸಿಕೊಂಡು ಧಾರ್ಮಿಕ ಮತಾಂತರ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದರು.
ತನಿಖೆಯ ವೇಳೆ ಅಲ್ಲಿ ಬೆಂಗಳೂರು ಮೂಲದ ನಾಲ್ಕು ಕುಟುಂಬಗಳ 23 ಸದಸ್ಯರು ಇರುವುದು ಕಂಡುಬಂದಿದೆ. ಇವರೆಲ್ಲರೂ ಮಂಗಳೂರಿಗೆ ಪ್ರವಾಸಕ್ಕೆ ಬಂದಿದ್ದು, ಪರಿಚಿತರಾದ ಚರ್ಚ್ ಫಾದರ್ ಅವರ ಸಹೋದರನ ಮನೆಯಲ್ಲಿ ತಂಗಿದ್ದರು. ಇವರು ಕಳೆದ 15-20 ವರ್ಷಗಳಿಂದ ಸ್ವಯಂಪ್ರೇರಿತವಾಗಿ ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿರುವುದಾಗಿ ಪೊಲೀಸರ ಮುಂದೆ ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ವಿಚಾರಣೆಯಿಂದ ಇದು ಬಲವಂತದ ಮತಾಂತರವಲ್ಲ, ಕೇವಲ ಪ್ರವಾಸಿಗರ ಭೇಟಿ ಎಂಬುದು ದೃಢಪಟ್ಟಿದೆ. ಯಾವುದೇ ಅನೈತಿಕ ಚಟುವಟಿಕೆಗಳು ಅಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಕಳೆದ ಕೆಲವು ಗಂಟೆಗಳಿಂದ ಹರಿದಾಡುತ್ತಿದ್ದ ಮತಾಂತರದ ವದಂತಿಗಳಿಗೆ ಕಡಬ ಪೊಲೀಸರು ಅಧಿಕೃತವಾಗಿ ತೆರೆ ಎಳೆದಿದ್ದಾರೆ.







Comments