ಸಾಕು ಬೆಕ್ಕಿನ ಸಮಯಪ್ರಜ್ಞೆ: ಕುಸಿಯುವ ಮುನ್ನವೇ ಹೊರ ಓಡಿ ತಂದೆ-ಮಗನ ಪ್ರಾಣ ಉಳಿಸಿದ ಮೂಕಪ್ರಾಣಿ!
- Jun 7
- 1 min read

ಬಾಗಲಕೋಟೆ ನಗರದ ವಲ್ಲಭಬಾಯಿ ನಗರದಲ್ಲಿ ಧಾರಾಕಾರ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬೀಳುವ ಕೆಲವೇ ಕ್ಷಣಗಳ ಮುನ್ನ, ಸಾಕು ಬೆಕ್ಕಿನ ಕಾರಣದಿಂದ ತಂದೆ ಮತ್ತು ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ರೋಮಾಂಚನಕಾರಿ ಘಟನೆ ಸ್ಥಳೀಯರಲ್ಲಿ ತೀವ್ರ ಅಚ್ಚರಿ ಮೂಡಿಸಿದ್ದು, ಸಾಕು ಬೆಕ್ಕೇ ಈ ಕುಟುಂಬದ ಪಾಲಿಗೆ ನಿಜವಾದ ಜೀವ ರಕ್ಷಕನಾಗಿದೆ.
ಮನೆಯಲ್ಲಿದ್ದ ಶಬ್ಬೀರ್ ಬಾಗವಾನ್ ಮತ್ತು ಅವರ ಪುತ್ರ ಆರ್ಬಾಜ್ ಅವರು ಮಣ್ಣು ಉದುರುವುದನ್ನು ಗಮನಿಸುವಷ್ಟರಲ್ಲಿ, ಅವರ ಸಾಕು ಬೆಕ್ಕು ಭಯದಿಂದ ಹೊರಗೆ ಓಡಿದೆ. ಅದನ್ನು ಹಿಡಿಯಲು ತಂದೆ-ಮಗ ಇಬ್ಬರೂ ಮನೆಯಿಂದ ಹೊರಬಂದ ತಕ್ಷಣ ಇಡೀ ಮೇಲ್ಛಾವಣಿ ಧರೆಗುರುಳಿದೆ. ಅದೃಷ್ಟವಶಾತ್ ಉಳಿದ ಕುಟುಂಬಸ್ಥರು ಮದುವೆಗೆ ಹೋಗಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಪ್ರಾಣಾಪಾಯದಿಂದ ಪಾರಾದರೂ, ಮನೆಯಲ್ಲಿದ್ದ ಸಾಮಗ್ರಿಗಳು ಹಾಗೂ ವ್ಯಾಪಾರಕ್ಕಾಗಿ ತಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣುಗಳು ನಾಶವಾಗಿ ಕುಟುಂಬಕ್ಕೆ ಭಾರೀ ಆರ್ಥಿಕ ನಷ್ಟ ಸಂಭವಿಸಿದೆ. ಸದ್ಯ ಸಂಕಷ್ಟದಲ್ಲಿರುವ ಈ ಬಡ ಕುಟುಂಬವು ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿದೆ.







Comments