ಅಕ್ರಮ ಜಾನುವಾರು ಸಾಗಾಟ: ಉಪ್ಪಿನಂಗಡಿಯಲ್ಲಿ ಇಬ್ಬರ ಬಂಧನ
- Jun 18
- 1 min read

ಹಾಸನದಿಂದ ಕೇರಳಕ್ಕೆ ದಾಖಲೆಗಳಿಲ್ಲದೆ ಅಕ್ರಮ ಹಾಗೂ ಹಿಂಸಾತ್ಮಕವಾಗಿ ಈಚರ್ ಲಾರಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಜೂನ್ 17ರ ನಸುಕಿನ ಜಾವ 34 ನೆಕ್ಕಿಲಾಡಿಯ ಆನೆಬೈಲ್ ಎಂಬಲ್ಲಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಂಧಿತರನ್ನು ಲಾರಿ ಚಾಲಕ ಕಡೂರು ನಿವಾಸಿ ಪರ್ದಿನ್ ಖಾನ್ ಹಾಗೂ ಹೊಳೆನರಸೀಪುರದ ಜಾವೀದ್ ಪಾಷಾ ಎಂದು ಗುರುತಿಸಲಾಗಿದೆ. ರೆಹಮಾನ್ ಹೊಸೂರು ಪರಾರಿಯಾದ ಆರೋಪಿ. ಉಪ್ಪಿನಂಗಡಿ ಉಪನಿರೀಕ್ಷಕ ಸುತೇಶ್ ಕೆ.ಪಿ. ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಈ ಕಾರ್ಯಾಚರಣೆ ನಡೆಸಿದ್ದಾರೆ.
ಲಾರಿಯನ್ನು ತಡೆದು ಪರಿಶೀಲಿಸಿದಾಗ ಯಾವುದೇ ಪರವಾನಗಿ ಇಲ್ಲದೆ ಹಿಂಸಾತ್ಮಕವಾಗಿ ತುಂಬಿದ್ದ 16 ಜಾನುವಾರುಗಳು ಪತ್ತೆಯಾಗಿವೆ. ಪೊಲೀಸರು ಜಾನುವಾರು ಹಾಗೂ ಲಾರಿಯನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.







Comments