ತುಳು ನಾಡಿಗೆ ಒಲಿದ ಸಂಗೀತ ಸರಸ್ವತಿ: ‘ಸರಿಗಮಪ ಲಿಟಲ್ ಚಾಂಪ್ಸ್’ನಲ್ಲಿ ಮಂಗಳೂರಿಗೆ ಡಬಲ್ ಧಮಾಕಾ!

ಮಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’ನ ಅದ್ದೂರಿ ಫಿನಾಲೆ ತೆರೆ ಕಂಡಿದ್ದು, ಮಂಗಳೂರಿನ ಇಬ್ಬರು ಬಾಲಪ್ರತಿಭೆಗಳು ವಿನ್ನರ್ ಹಾಗೂ ಮೊದಲ ರನ್ನರ್ ಅಪ್ ಸ್ಥಾನ ಪಡೆದು ತುಳು ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.
ಮಂಗಳೂರಿನ ಅಶ್ಮಿತ್ ಈ ಬಾರಿಯ ‘ಸರಿಗಮಪ ಲಿಟಲ್ ಚಾಂಪ್ಸ್’ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಗಾಯಕಿ ಇಂದು ನಾಗರಾಜ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅಶ್ಮಿತ್ಗೆ ವಿಜೇತ ಟ್ರೋಫಿಯೊಂದಿಗೆ ₹20 ಲಕ್ಷ ನಗದು ಬಹುಮಾನ ದೊರೆತಿದೆ.

ಗಾಯನದ ಜೊತೆಗೆ ವಯೊಲಿನ್ ವಾದನದಲ್ಲೂ ಗಮನ ಸೆಳೆದ ಅಶ್ಮಿತ್, ಫಿನಾಲೆಯಲ್ಲಿ ಎದುರಾದ ಕಠಿಣ ಪೈಪೋಟಿಯನ್ನು ಮೆಟ್ಟಿ ನಿಂತು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಅಶ್ಮಿತ್ಗೆ ತೀವ್ರ ಪೈಪೋಟಿ ನೀಡಿದ ಮಂಗಳೂರಿನ ಮತ್ತೊಬ್ಬ ಪ್ರತಿಭೆ ಅಚಿಂತ್ಯ ರೈ ಮೊದಲ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಫಿನಾಲೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಚಿಂತ್ಯ ಅವರಿಗೆ ಟ್ರೋಫಿ ಹಾಗೂ ₹15 ಲಕ್ಷ ನಗದು ಬಹುಮಾನ ಲಭಿಸಿದೆ.
ಈ ಮೂಲಕ ‘ಸರಿಗಮಪ ಲಿಟಲ್ ಚಾಂಪ್ಸ್’ ಫಿನಾಲೆಯಲ್ಲಿ ಮಂಗಳೂರಿನ ಇಬ್ಬರು ಪ್ರತಿಭೆಗಳು ಮೊದಲ ಎರಡು ಸ್ಥಾನಗಳನ್ನು ಪಡೆದು ‘ಮಂಗಳೂರಿಗೆ ಡಬಲ್ ಧಮಾಕಾ’ ನೀಡಿದಂತಾಗಿದೆ.
ಎರಡು ಹಂತಗಳಲ್ಲಿ ನಡೆದ ಈ ಮಹಾಸಂಗ್ರಾಮದ ಅಂತಿಮ ಸುತ್ತಿಗೆ ಒಟ್ಟು ಆರು ಬಾಲಪ್ರತಿಭೆಗಳು ಅರ್ಹತೆ ಪಡೆದಿದ್ದರು. ತಮ್ಮದೇ ಆದ ವಿಶಿಷ್ಟ ಗಾಯನ ಪ್ರತಿಭೆಯಿಂದ ಈ ಎಲ್ಲಾ ಸ್ಪರ್ಧಿಗಳು ಪ್ರೇಕ್ಷಕರ ಗಮನ ಸೆಳೆದಿದ್ದರು. ಅಂತಿಮ ಹಣಾಹಣಿಯಲ್ಲಿ ಮಂಗಳೂರಿನ ಅಶ್ಮಿತ್ ಹಾಗೂ ಅಚಿಂತ್ಯ ರೈ ಮಿಂಚುವ ಮೂಲಕ ತುಳು ನಾಡಿನ ಸಂಗೀತ ಪ್ರತಿಭೆಗೆ ಮತ್ತೊಮ್ಮೆ ಹೆಮ್ಮೆ ತಂದಿದ್ದಾರೆ.







Comments