ಮಂಗಳೂರು: ಗುದದ್ವಾರದಲ್ಲಿ ಮೊಬೈಲ್ ಅಡಗಿಸಿ ಜೈಲು ಪ್ರವೇಶಿಸಲು ಯತ್ನಿಸಿದ ಕೈದಿ ಪತ್ತೆ
- May 1
- 1 min read

ಮಂಗಳೂರು, ಮೇ 01: ಆಸ್ಪತ್ರೆಯಿಂದ ಬಿಡುಗಡೆಯಾದ ಕೈದಿಯೊಬ್ಬನು ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಕೊಂಡು ಜೈಲಿಗೆ ಪ್ರವೇಶಿಸಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮುಹಮ್ಮದ್ ತೋಹಿದ್ ಎಂಬ ಕೈದಿಯನ್ನು ಏಪ್ರಿಲ್ 24ರಂದು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಏಪ್ರಿಲ್ 29ರಂದು ಡಿಸ್ಚಾರ್ಜ್ ಆಗಿದ್ದ ತೋಹಿದ್ ಅವರನ್ನು ಸಂಜೆ ವೇಳೆ ಮಂಗಳೂರು ಕೊಡಿಯಾಲ್ಬೈಲಿನ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

ಜೈಲಿನ ಪ್ರವೇಶದ್ವಾರದಲ್ಲಿ ಕರ್ತವ್ಯದಲ್ಲಿದ್ದ ಕೆಎಸ್ಐಎಸ್ಎಫ್ ಸಿಬ್ಬಂದಿ ಯಂತ್ರದ ಮೂಲಕ ತಪಾಸಣೆ ನಡೆಸಿದಾಗ ಸಂಶಯಾಸ್ಪದ ಶಬ್ದ ಕೇಳಿಬಂದಿದೆ. ಇದನ್ನು ಗಮನಿಸಿದ ಸಿಬ್ಬಂದಿ ವಿಚಾರಣೆ ನಡೆಸಿದಾಗ, ಕೈದಿ ತನ್ನ ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ತಕ್ಷಣ ಕೈದಿಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಕೀಪ್ಯಾಡ್ ಮೊಬೈಲ್ ಅನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.







Comments