ಕಾರವಾರ: ವೈರಲ್ ವೀಡಿಯೋಗೆ ಬಲಿಯಾದ ವೈದ್ಯ; ರಾಜೀವ್ ಪಿಕಳೆ ಪ್ರಕರಣದಲ್ಲಿ ಇಬ್ಬರ ಬಂಧನ
- sathyapathanewsplu
- Jan 24
- 1 min read

ಕಾರವಾರ: ಸಾಮಾಜಿಕ ಹಾಗೂ ವೈದ್ಯಕೀಯ ವಲಯದಲ್ಲಿ ಗೌರವ ಪಡೆದ ಕುಟುಂಬಕ್ಕೆ ಸೇರಿದ ವೈದ್ಯ ರಾಜೀವ್ ಪಿಕಳೆ ಆತ್ಮಹತ್ಯೆ (Rajiv Pikale Case) ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಜಾಲತಾಣದಲ್ಲಿ ಅವಮಾನಕಾರಿ ವೀಡಿಯೋ ವೈರಲ್ ಆಗಿದ್ದೇ ಈ ದುರಂತಕ್ಕೆ ಕಾರಣವೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿಯಲ್ಲಿ ವಾಸವಾಗಿದ್ದ ರಾಜೀವ್ ಪಿಕಳೆ, ತಮ್ಮ ನಿವಾಸದಲ್ಲೇ ಡಬಲ್ ಬ್ಯಾರಲ್ ಗನ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಒಂಟಿಯಾಗಿ ವಾಸಿಸುತ್ತಿದ್ದ ಪಿಕಳೆ ಕುಟುಂಬವು ಕಾರವಾರದಲ್ಲಿ ಎರಡು ತಲೆಮಾರುಗಳಿಂದ ವೈದ್ಯಕೀಯ ಸೇವೆ ನೀಡುತ್ತ ಬಂದಿದೆ.
ಕೆಲವು ದಿನಗಳ ಹಿಂದೆ, ರಾಜೀವ್ ಪಿಕಳೆ ರೋಗಿಗೆ ಅವಧಿ ಮೀರಿದ ಔಷಧ ನೀಡಿದ್ದ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ವಿಚಾರದಿಂದ ತೀವ್ರ ಮನನೊಂದಿದ್ದ ಪಿಕಳೆ, ತಪ್ಪಾಗಿದೆ ಎಂದು ಕ್ಷಮೆಯನ್ನೂ ಕೇಳಿದ್ದರು. ಆದರೆ ವೀಡಿಯೋ ವೈರಲ್ ಆಗುತ್ತಲೇ ಇದ್ದುದರಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋವನ್ನು ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪದ ಮೇಲೆ ಸುಭಾಷ್ ಹಾಗೂ ಹರಿಶ್ಚಂದ್ರ ಎಂಬವರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ಪ್ರಕಾರ, ವೀಡಿಯೋ ಹರಡುವಿಕೆಯೇ ಪಿಕಳೆಯ ಮಾನಸಿಕ ಸ್ಥಿತಿಗೆ ಭಾರೀ ಆಘಾತ ನೀಡಿದೆ.
ಡೆತ್ ನೋಟ್ನಲ್ಲಿ ರಾಜೀವ್ ಪಿಕಳೆ ತಮ್ಮ ಸಾವಿಗೆ ತಾವೇ ಕಾರಣ ಎಂದು ಉಲ್ಲೇಖಿಸಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿನ ಅವಮಾನ ಮತ್ತು ಒತ್ತಡವೇ ಈ ದುರಂತಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.








Comments