ಜೈ ತುಳುನಾಡು ಬೆಂಗಳೂರು ಘಟಕಕ್ಕೆ ನೂತನ ಸಮಿತಿ ಆಯ್ಕೆ: ವಿನಯ್ ಮಣಿಯಾನಮನೆ ನೂತನ ಅಧ್ಯಕ್ಷ
- Apr 2
- 1 min read

ಬೆಂಗಳೂರಿನಲ್ಲಿ ನೆಲೆಸಿರುವ ತುಳುನಾಡಿನ ಜನರನ್ನು ಒಗ್ಗೂಡಿಸಿ, ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷಾ ಮಾನ್ಯತೆಗಾಗಿ ಶ್ರಮಿಸುತ್ತಿರುವ 'ಜೈ ತುಳುನಾಡು (ರಿ.)' ಬೆಂಗಳೂರು ಘಟಕದ 2026-27ನೇ ಸಾಲಿನ ವಾರ್ಷಿಕ ಮಹಾಸಭೆಯು ಮಾ. 29ರಂದು ಮೆಜೆಸ್ಟಿಕ್ ಸಮೀಪದ ಸ್ವಾಗತ್ ಹೋಟೆಲ್ನಲ್ಲಿ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಸಂಘಟನೆಯ ಸಮಾಜಮುಖಿ ಕಾರ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.

ಈ ಮಹಾಸಭೆಯಲ್ಲಿ ಮುಂದಿನ ಸಾಲಿನ ನೂತನ ಸಮಿತಿಯನ್ನು ರಚಿಸಲಾಗಿದ್ದು, ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲಾಯಿತು. ಸಂಘಟನೆಯ ನೂತನ ಅಧ್ಯಕ್ಷರಾಗಿ ವಿನಯ್ ಮಣಿಯಾನಮನೆ ಅವರು ಬಹುಮತದಿಂದ ಆಯ್ಕೆಯಾದರು. ವಿನಯ್ ಅವರು ಪ್ರಸ್ತುತ ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಮೂಲತಃ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮಣಿಯಾನ ಮನೆ ಹರಿಶ್ಚಂದ್ರ ಮತ್ತು ತೇಜಾವತಿ ದಂಪತಿಗಳ ಪುತ್ರರಾಗಿದ್ದಾರೆ.
ಸಾಂಸ್ಕೃತಿಕ ಹಾಗೂ ಭಾಷಾ ಚಳುವಳಿಯಲ್ಲಿ ಮುಂಚೂಣಿಯಲ್ಲಿರುವ ಈ ಸಂಘಟನೆಯು, ನೂತನ ಅಧ್ಯಕ್ಷರ ನೇತೃತ್ವದಲ್ಲಿ ತುಳು ಭಾಷೆಯ ಉಳಿವಿಗಾಗಿ ಇನ್ನಷ್ಟು ಬಲಿಷ್ಠವಾಗಿ ಕೆಲಸ ಮಾಡುವ ಸಂಕಲ್ಪ ಮಾಡಿದೆ. ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿವಿಧ ಭಾಗಗಳಿಂದ ತುಳುವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.







Comments