ಭಾರತದ ಇತಿಹಾಸದಲ್ಲೇ ಮಹತ್ವದ ತೀರ್ಪು ತಂದೆ-ಮಗನ ಲಾಕಪ್ ಡೆತ್ ಪ್ರಕರಣ: ಒಂಬತ್ತು ಪೊಲೀಸರಿಗೆ ಮರಣದಂಡನೆ ಶಿಕ್ಷೆ
- 7 days ago
- 1 min read

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್ಕುಲಂನಲ್ಲಿ ನಡೆದ ತಂದೆ-ಮಗನ ಅಮಾನವೀಯ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಜಿಲ್ಲಾ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಪೊಲೀಸ್ ಕಸ್ಟಡಿಯಲ್ಲಿ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಸಾವಿಗೆ ಕಾರಣರಾದ ಇನ್ಸ್ಪೆಕ್ಟರ್ ಶ್ರೀಧರ್ ಸೇರಿದಂತೆ ಒಂಬತ್ತು ಪೊಲೀಸರಿಗೆ ನ್ಯಾಯಾಧೀಶ ಜಿ. ಮುತ್ತುಕುಮಾರನ್ ಮರಣದಂಡನೆ ವಿಧಿಸಿದ್ದಾರೆ. ಈ ಪ್ರಕರಣವನ್ನು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಬಣ್ಣಿಸಿರುವ ನ್ಯಾಯಾಲಯವು, ಪೊಲೀಸರ ಈ ಕ್ರೌರ್ಯವು ಸಮಾಜದಲ್ಲಿ ಕಾನೂನಿನ ಮೇಲಿದ್ದ ವಿಶ್ವಾಸವನ್ನೇ ಅಲುಗಾಡಿಸಿದೆ ಎಂದು ಅಭಿಪ್ರಾಯಪಟ್ಟಿದೆ.

2020ರ ಕೊರೊನಾ ಲಾಕ್ಡೌನ್ ಸಮಯದಲ್ಲಿ ನಿಗದಿತ ಸಮಯ ಮೀರಿ ಅಂಗಡಿ ತೆರೆದಿದ್ದರು ಎಂಬ ಸಣ್ಣ ಕಾರಣಕ್ಕಾಗಿ ಜಯರಾಜ್ ಮತ್ತು ಬೆನ್ನಿಕ್ಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆಯ ನೆಪದಲ್ಲಿ ರಾತ್ರಿಯಿಡೀ ಇವರಿಬ್ಬರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಲಾಠಿಗಳಿಂದ ಹಲ್ಲೆ ನಡೆಸಿದ್ದಲ್ಲದೆ, ಗುಪ್ತಾಂಗಗಳಿಗೆ ಚಿತ್ರಹಿಂಸೆ ನೀಡಿದ ಪರಿಣಾಮ ತಂದೆ-ಮಗ ಇಬ್ಬರೂ ಪೊಲೀಸ್ ಠಾಣೆಯಲ್ಲೇ ಸಾವನ್ನಪ್ಪಿದ್ದರು. ಈ ಘಟನೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಪೊಲೀಸರ ದರ್ಪದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು.
ಪ್ರಕರಣದ ಗಂಭೀರತೆ ಅರಿತ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಅಧಿಕಾರಿಗಳು ಸುದೀರ್ಘ ತನಿಖೆ ನಡೆಸಿ ಸುಮಾರು 2,427 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಠಾಣೆಯ ಮಹಿಳಾ ಕಾನ್ಸ್ಟೆಬಲ್ ನೀಡಿದ ಸಾಕ್ಷ್ಯ ಮತ್ತು ರಕ್ತಸಿಕ್ತ ಲಾಠಿಗಳ ಆಧಾರದ ಮೇಲೆ ಪೊಲೀಸರ ಪಾಪಿ ಕೃತ್ಯ ಸಾಬೀತಾಗಿತ್ತು. ವಿಚಾರಣೆ ವೇಳೆ ಒಬ್ಬ ಆರೋಪಿ ಕೊರೊನಾದಿಂದ ಸಾವನ್ನಪ್ಪಿದ್ದರೆ, ಉಳಿದ 9 ಆರೋಪಿಗಳಿಗೆ ಈಗ ಗಲ್ಲು ಶಿಕ್ಷೆಯಾಗಿದೆ. ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಪೊಲೀಸರಿಗೆ ಈ ಮಟ್ಟದ ಕಠಿಣ ಶಿಕ್ಷೆಯಾಗಿರುವುದು ಅತ್ಯಂತ ಮಹತ್ವದ ತೀರ್ಪು ಎಂದು ಪರಿಗಣಿಸಲಾಗಿದೆ.







Comments