ರೋಗವನ್ನು ಮೂಲದಿಂದ ನಿವಾರಿಸುವ ಸಾಮರ್ಥ್ಯ ಹೋಮಿಯೋಪತಿ ಔಷಧಿಗಿದೆ.-ಡಾ.ಶ್ರೀ ದೇವಿ ವೆಂಕಟಾಪುರ

ಮಂಗಳೂರು : ಯಾವುದೇ ಅಡ್ಡ ಪರಿಣಾಮವಿಲ್ಲದ; ರೋಗವನ್ನು ಮೂಲದಿಂದ ನಿವಾರಿಸುವ ಹೋಮಿಯೋಪತಿ ಔಷಧಿಗಳನ್ನು ಶಿಶುವಿನಿಂದ ಹಿಡಿದು ಎಲ್ಲಾ ವಯೋಮಾನದ ವ್ಯಕ್ತಿಗಳು ತಮ್ಮ ಇತರ ಔಷಧಿಯೊಂದಿಗೆ ಕೂಡಾ ಸೇವಿಸಬಹುದು ಎಂದು ಹೋಮಿಯೋಪತಿ ತಜ್ಞರಾದ ಆಯುಷ್ ಇಲಾಖೆಯ ಡಾ.ಶ್ರೀ ದೇವಿ ವೆಂಕಟಾಪುರ ತಿಳಿಸಿದರು.

ಅವರು ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯ (ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯಡಿ) ಸಹಯೋಗದೊಂದಿಗೆ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (KSTA) ಭವನ, ಗೋರಿಗುಡ್ಡದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಹೋಮಿಯೋಪತಿ ಚಿಕಿತ್ಸಾ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮತ್ತೋರ್ವ ಅತಿಥಿ ಹೋಮಿಯೋಪತಿ ತಜ್ಞರಾದ ಆಯುಷ್ ಇಲಾಖೆಯ ಡಾ.ಅನ್ನಪೂರ್ಣಭಂಡಾರಿಯವರು ಬಾಲ್ಯದಲ್ಲಿ ಮಕ್ಕಳಿಗೆ ಪ್ರೊಟೀನ್ ಯುಕ್ತ ಆಹಾರ ಒದಗಿಸಿದರೆ ಯೌವನದಲ್ಲಿ ಆರೋಗ್ಯಕರವಾಗಿ ಬೆಳೆಯುತ್ತಾರೆ ಎಂದು ಹೇಳಿದರು. ಅತಿಥಿಯಾದ ಮಂಗಳೂರು ನಗರ ಪಾಲಿಕೆಯ ನಿಕಟ ಪೂರ್ವ ಸದಸ್ಯರಾದ ಶ್ರೀ ಸಂದೀಪ್ ಗರೋಡಿಯವರು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ ಕಂಕನಾಡಿ ಘಟಕದ ಕಾರ್ಯವನ್ನು ಶ್ಲಾಘಿಸಿದರು.ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಒಂದನೇ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ರಾಕೇಶ್ ರವರು ಯುವವಾಹಿನಿಯ 35 ಘಟಕಗಳು ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಸ್ವಾಸ್ಥ್ಯ, ಸದೃಢವಾದ ಸಮಾಜ ನಿರ್ಮಿಸುವಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಡಿ ವೇದವ್ಯಾಸ ಕಾಮತ್ ರವರು ಆಗಮಿಸಿದ್ದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಇಂದಿರಾರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಕಂಕನಾಡಿ ಘಟಕದ ಅಧ್ಯಕ್ಷರಾದ ಶ್ರೀಮತಿ ಸುರೇಖಾ ಮೋಹನ್ ವಹಿಸಿದ್ದರು. ವೇದಿಕೆಯಲ್ಲಿ ಯುವವಾಹಿನಿ (ರಿ) ಕಂಕನಾಡಿ ಘಟಕದ ಕಾರ್ಯದರ್ಶಿಯಾದ ಶ್ರೀ ಧನುಷ್ ಹಾಗೂ ಕಾರ್ಯಕ್ರಮ ಸಂಚಾಲಕ ಮತ್ತು ಕಂಕನಾಡಿ ಘಟಕದ ಆರೋಗ್ಯ ನಿರ್ದೇಶಕ ರೋಹಿತ್ ಕುಮಾರ್ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಶ್ರೀಮತಿ ಸುರೇಖಾ ಮೋಹನ್ ರವರು ಸ್ವಾಗತಿಸಿದರು. ರೋಹಿತ್ ಕುಮಾರ್ ಧನ್ಯವಾದಗೈದರು. ಘಟಕದ ಸದಸ್ಯರಾದ ಶ್ರೀಮತಿ ಮೇಘಾ ಧನುಷ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ದೇವಕಿ ಕಿಶೋರ್ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ನಂತರ ಉಚಿತ ಆರೋಗ್ಯ ತಪಾಸಣೆ ಹಾಗೂ ಹೋಮಿಯೋಪತಿ ಚಿಕಿತ್ಸಾ ಶಿಬಿರ ನಡೆಯಿತು. ಸುಮಾರು 80ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರ ಪ್ರಯೋಜನ ಪಡೆದುಕೊಂಡರು.







Comments