ಹಿಮಪಾತದ ಅಬ್ಬರಕ್ಕೆ ಹಿಮಾಚಲ ಸ್ತಬ್ಧ: 600ಕ್ಕೂ ಹೆಚ್ಚು ರಸ್ತೆಗಳು ಬಂದ್, ಮೈಕೊರೆಯುವ ಚಳಿಯಲ್ಲಿ ಪ್ರವಾಸಿಗರ ಪರದಾಟ!
- sathyapathanewsplu
- Jan 25
- 1 min read

ಶಿಮ್ಲಾ: ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಪ್ರಕೃತಿಯ ಮುನಿಸು ಮುಂದುವರಿದಿದ್ದು, ಭಾರೀ ಹಿಮಪಾತದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮನಾಲಿ, ಶಿಮ್ಲಾ ಮತ್ತು ಕಾಲ್ಕಾ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸತತವಾಗಿ ಹಿಮ ಬೀಳುತ್ತಿದ್ದು, ಒಂದೆಡೆ ಪ್ರವಾಸಿಗರು ಹಿಮದ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ಸಾವಿರಾರು ಜನರು ಊರುಗಳಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಲು ಜಿಲ್ಲೆಯ ಕೋಥಿ ಮತ್ತು ಮನಾಲಿಯಲ್ಲಿ ಸುಮಾರು 8 ಕಿಲೋಮೀಟರ್ಗೂ ಅಧಿಕ ಉದ್ದದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರವಾಸಿಗರು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ.
ರಾಜ್ಯಾದ್ಯಂತ ಹಿಮದ ಹೊದಿಕೆ ಆವರಿಸಿದ್ದರಿಂದ ಒಟ್ಟು 685 ರಸ್ತೆಗಳಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಪೈಕಿ ಲಹೌಲ್ ಮತ್ತು ಸ್ಪತಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಂದರೆ 292 ರಸ್ತೆಗಳು ಬಂದ್ ಆಗಿವೆ. ಚಂಬಾ, ಮಂಡಿ ಮತ್ತು ಕುಲು ಜಿಲ್ಲೆಗಳಲ್ಲೂ ಪರಿಸ್ಥಿತಿ ಗಂಭೀರವಾಗಿದ್ದು, ನೂರಾರು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಶಿಮ್ಲಾದ ನರಕಂದ, ಜುಬ್ಬಲ್ ಮತ್ತು ರೋಹ್ರುನಂತಹ ಪಟ್ಟಣಗಳು ಸಂಪರ್ಕ ಕಡಿತಗೊಂಡು ಪ್ರತ್ಯೇಕ ದ್ವೀಪಗಳಂತಾಗಿವೆ. ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಟ್ರಾಫಿಕ್ ನಿರ್ವಹಣೆ ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.
ಕಳೆದ ಎರಡು ದಿನಗಳಿಂದ ಮನಾಲಿಯಲ್ಲಿ ಸಿಲುಕಿಕೊಂಡಿರುವ ಸಾವಿರಾರು ಪ್ರವಾಸಿಗರು ಆಹಾರ ಮತ್ತು ಸರಿಯಾದ ವಸತಿ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ಇದರ ನಡುವೆ ಹವಾಮಾನ ಇಲಾಖೆಯು ಮತ್ತೊಂದು ಆಘಾತಕಾರಿ ಮುನ್ಸೂಚನೆ ನೀಡಿದ್ದು, ಇಂದು ರಾಜ್ಯಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಹಾಗೂ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಸಿದೆ. ಇದರಿಂದಾಗಿ ರಸ್ತೆಗಳ ತೆರವು ಕಾರ್ಯಾಚರಣೆಗೆ ಹಿನ್ನಡೆಯಾಗುವ ಭೀತಿ ಎದುರಾಗಿದ್ದು, ಹಿಮಪಾತ ಪೀಡಿತ ಪ್ರದೇಶಗಳಲ್ಲಿ ಆಡಳಿತ ಮಂಡಳಿಯು ಹೈ ಅಲರ್ಟ್ ಘೋಷಿಸಿದೆ.






Comments