ಚೌತಿಯ ಚಂದ್ರನ ನೋಡಿದ್ರೆ ದೋಷ ಬರುತ್ತಾ? 🌙😳 ಶಮಂತಕ ಮಣಿಯ ರಹಸ್ಯದ ಹಿಂದೆ ಇರುವ ಪೌರಾಣಿಕ ಕಥೆ ಏನು?

ಏನಿದು ದೇವಾನುದೇವತೆಗಳನ್ನೂ ಬಿಡದ ಚಂದ್ರನ ಶಾಪ!
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಚೌತಿಯ ಚಂದ್ರನನ್ನು ನೋಡಬಾರದು ಎಂಬ ಪ್ರತೀತಿ ಎಲ್ಲರಲ್ಲೂ ಇದೆ. ಇದರ ಹಿಂದೆ ಅತ್ಯಂತ ಕುತೂಹಲಕಾರಿ ಹಾಗೂ ಪೌರಾಣಿಕ ಕಥೆಯೊಂದಿದೆ.
ಗಣಪತಿ ಮತ್ತು ಚಂದ್ರನ ಶಾಪದ ಕಥೆ
ಒಮ್ಮೆ ಭೂಲೋಕದಲ್ಲಿ ಭಕ್ತರ ಮನೆಯಲ್ಲಿ ಕಡುಬು, ಕಜ್ಜಾಯ ಹಾಗೂ ನೈವೇದ್ಯಗಳನ್ನು ಭಕ್ಷಿಸಿದ ಗಣಪತಿಯು ಭಾರವಾದ ಹೊಟ್ಟೆಯೊಂದಿಗೆ ತನ್ನ ವಾಹನವಾದ ಇಲಿಯ ಮೇಲೇರಿ ಕೈಲಾಸದತ್ತ ಹೊರಟಿದ್ದ. ಚೌತಿಯ ಚಂದ್ರನು ಬಾನಿನಲ್ಲಿ ಮುಗುಳುನಗೆ ಸೂಸುತ್ತಾ ಗಣಪನನ್ನು ಗಮನಿಸುತ್ತಿದ್ದ. ಮಾರ್ಗಮಧ್ಯೆ ಹಾವೊಂದನ್ನು ಕಂಡು ಹೆದರಿದ ಇಲಿ ಓಡಿದಾಗ, ಗಣಪತಿ ಕೆಳಗೆ ಬಿದ್ದು ಆತನ ಹೊಟ್ಟೆ ಒಡೆಯಿತು. ತಿಂದ ಕಡುಬೆಲ್ಲ ಹೊರಚೆಲ್ಲಿತು. ಗಣಪನು ಸಮಾಧಾನದಿಂದ ಎಲ್ಲವನ್ನೂ ಮರಳಿ ಹೊಟ್ಟೆಗೆ ತುಂಬಿಕೊಂಡು, ಆ ಹಾವನ್ನೇ ಸೊಂಟಕ್ಕೆ ಬಿಗಿದುಕೊಂಡ.
ಇದನ್ನೆಲ್ಲಾ ನೋಡುತ್ತಿದ್ದ ಚೆಲುವ ಚಂದಿರ ಗಹಗಹಿಸಿ ನಕ್ಕ. ಇದರಿಂದ ಕೋಪಗೊಂಡ ಗಣೇಶ, "ನಿನ್ನ ಸೌಂದರ್ಯದ ಅಹಂಕಾರ ಮುರಿಯಲಿ, ಇನ್ಮುಂದೆ ನಿನ್ನನ್ನು ಯಾರೂ ನೋಡದಿರಲಿ" ಎಂದು ಶಾಪ ನೀಡಿದ. ಚಂದ್ರನು ಕ್ಷಮೆ ಕೋರಿದಾಗ ಪ್ರಸನ್ನನಾದ ಗಣಪನು, "ಬಾದ್ರಪದ ಶುಕ್ಲ ಚೌತಿಯ ದಿನ ನಿನ್ನನ್ನು ನೋಡಿದವರಿಗೆ ಕಳ್ಳತನದ ಅಪವಾದ ಬರಲಿ" ಎಂದು ಶಾಪವನ್ನು ಸಡಿಲಗೊಳಿಸಿದ.
ಶ್ರೀಕೃಷ್ಣನಿಗೂ ತಪ್ಪಲಿಲ್ಲ ಶಮಂತಕ ಮಣಿಯ ಅಪವಾದ
ದ್ವಾಪರಯುಗದಲ್ಲಿ ಶ್ರೀಕೃಷ್ಣನು ಚೌತಿಯ ದಿನ ಹಾಲಿನ ಪಾತ್ರೆಯಲ್ಲಿ ಚೌತಿಯ ಚಂದ್ರನ ಪ್ರತಿಬಿಂಬವನ್ನು ಆಕಸ್ಮಿಕವಾಗಿ ನೋಡಿದ್ದ. ಇದರ ಪರಿಣಾಮವಾಗಿ ಆತನ ಮೇಲೂ ಶಮಂತಕ ಮಣಿಯನ್ನು ಕದ್ದ ಅಪವಾದ ಬಂದೊದಗಿತು.
ಸತ್ರಾಜಿತನ ಬಳಿಯಿದ್ದ, ದಿನಕ್ಕೆ ೮ ಸೇರು ಬಂಗಾರ ನೀಡುತ್ತಿದ್ದ ಶಮಂತಕ ಮಣಿಯನ್ನು ಧರಿಸಿ ಆತನ ಸಹೋದರ ಪ್ರಸೇನನು ಬೇಟೆಗೆ ಹೋದಾಗ ಸಿಂಹವೊಂದು ಆತನನ್ನು ಕೊಂದಿತು. ನಂತರ ಜಾಂಬವಂತನು ಆ ಸಿಂಹವನ್ನು ಕೊಂದು ಮಣಿಯನ್ನು ತನ್ನ ಮಗುವಿನ ತೊಟ್ಟಿಲಿಗೆ ಕಟ್ಟಿದ. ಆದರೆ, ಪುರಜನರು ಕೃಷ್ಣನೇ ಮಣಿಗಾಗಿ ಪ್ರಸೇನನನ್ನು ಕೊಂದಿದ್ದಾನೆ ಎಂದು ಶಂಕಿಸಿದರು.
ತನ್ನ ಮೇಲಿದ್ದ ಅಪವಾದವನ್ನು ತೊಡೆದುಹಾಕಲು ಕೃಷ್ಣನು ಗಣಪತಿಯನ್ನು ಪೂಜಿಸಿ ಕಾಡಿಗೆ ತೆರಳಿದ. ಜಾಂಬವಂತನ ಗುಹೆಯನ್ನು ಹೊಕ್ಕು ಸತತ ೧೫ ದಿನಗಳ ಕಾಲ ಆತನೊಂದಿಗೆ ಭೀಕರ ಯುದ್ಧ ಮಾಡಿದ. ಕೊನೆಗೆ ಕೃಷ್ಣನು ಶ್ರೀರಾಮನ ರೂಪದಲ್ಲಿ ದರ್ಶನ ನೀಡಿದಾಗ, ಜಾಂಬವಂತನು ತನ್ನ ತಪ್ಪನ್ನು ಅರಿತು ಮಗಳು ಜಾಂಬವತಿಯನ್ನು ಕೃಷ್ಣನಿಗೆ ವಿವಾಹ ಮಾಡಿ, ಶಮಂತಕ ಮಣಿಯನ್ನು ಉಡುಗೊರೆಯಾಗಿ ನೀಡಿದ. ಕೃಷ್ಣನು ಮಣಿಯೊಂದಿಗೆ ಮರಳಿ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಿದ.
ದೋಷಕ್ಕೆ ಇಲ್ಲಿದೆ ಸರಳ ಪರಿಹಾರ
ಅಕಸ್ಮಾತ್ ಚೌತಿಯ ದಿನ ಚಂದ್ರ ದರ್ಶನವಾದರೆ, ಈ ಕಥೆಯನ್ನು ಓದುವುದರಿಂದ ಅಥವಾ ಕೇಳುವುದರಿಂದ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಜೊತೆಗೆ, ಈ ಕೆಳಗಿನ ಶ್ಲೋಕವನ್ನು ಜಪಿಸುವುದರಿಂದ ಚಂದ್ರ ದರ್ಶನದ ದೋಷ ನಿವಾರಣೆಯಾಗುತ್ತದೆ:
> "ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
> ಸುಕುಮಾರಕ ಮಾ ರೋದಿಃ ತವೇಷ ಶಮಂತಕಃ ||"
>







Comments