ವಿಶ್ವ ತುಳುವೆರ್ (ರಿ) ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ: ಪ್ರಚಾರ ನಿರ್ವಾಹಕ ಅಧ್ಯಕ್ಷರಾಗಿ ಕೀರ್ತಿ ಕಾರ್ಕಳ

ಪ್ರಸಿದ್ಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಯಾದ 'ವಿಶ್ವ ತುಳುವೆರ್ (ರಿ)' ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ಮುಖಂಡರಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ಸಂಘಟನೆಯ ಪ್ರಚಾರ ನಿರ್ವಾಹಕ ಅಧ್ಯಕ್ಷರಾಗಿ 'ತುಳುನಾಡ ತುಡರ್' ಖ್ಯಾತಿಯ ಕೀರ್ತಿ ಕಾರ್ಕಳ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ತುಳು ಹಾಗೂ ಕನ್ನಡ ಕಿರುತೆರೆಯಲ್ಲಿ ನಟನಾಗಿ ಸಣ್ಣ ಪುಟ್ಟ ಪಾತ್ರಗಳ ಮೂಲಕ ಮನೆಮಾತಾಗಿರುವ ಕೀರ್ತಿ ಕಾರ್ಕಳ ಅವರು, 'ನಮ್ಮ ತುಳುನಾಡು ಟ್ರಸ್ಟಿ'ನ ರಾಜ್ಯ ಸಂಚಾಲಕರಾಗಿಯೂ ತುಳು ಭಾಷೆ ಮತ್ತು ತುಳುನಾಡಿನ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕೇವಲ ಕಲಾ ಕ್ಷೇತ್ರ ಮಾತ್ರವಲ್ಲದೆ, ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಇವರು ಸಮಾಜ ಸೇವಕರಾಗಿಯೂ ಮುಂಚೂಣಿಯಲ್ಲಿದ್ದಾರೆ.
ಇದೇ ವೇಳೆ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಪ್ರಕಾಶ್ ಸಿಂಫೋನಿ ಅವರು ನೇಮಕಗೊಂಡಿದ್ದಾರೆ. ಕರಾವಳಿ ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಇವರು, ಕರಾವಳಿ ಕರ್ನಾಟಕ ನೃತ್ಯ ನಿರ್ದೇಶಕರ ಸಂಘ ಹಾಗೂ ಕರಾವಳಿ ಕರ್ನಾಟಕ ನೃತ್ಯ ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾ ಲೋಕದ ಜೊತೆಗೆ ಸದಾ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸಂಘಟನೆಯು ಇನ್ನಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.
ಇನ್ನು ಗಡಿನಾಡು ಕಾಸರಗೋಡು ಭಾಗದಲ್ಲಿ ಸಂಘಟನೆಯನ್ನು ಮುನ್ನಡೆಸಲು ಕೇರಳ ಘಟಕದ ಅಧ್ಯಕ್ಷರಾಗಿ ಬಹುಮುಖ ಪ್ರತಿಭೆ ಡಾ. ವಾಣಿಶ್ರೀ ಕಾಸರಗೋಡ ಅವರನ್ನು ಆಯ್ಕೆ ಮಾಡಲಾಗಿದೆ. ಬಾಲ್ಯದಲ್ಲೇ ಕ್ರೀಡಾ ಧ್ರುವತಾರೆಯಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದ ಇವರು, ಪ್ರಸ್ತುತ ತಮ್ಮ ಪತಿ ಡಾ. ವೆಂಕಟಗಿರೀಶ್ ಅವರೊಂದಿಗೆ ಕಾಸರಗೋಡಿನ ಚೂರಿಪಳ್ಳದ ನೆಲ್ಲಿಕಟ್ಟೆ ಎಂಬಲ್ಲಿ 'ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ'ವನ್ನು ನಡೆಸುತ್ತಾ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಇವರ ಸಾಹಿತ್ಯ ಮತ್ತು ಕಲಾ ಸಾಧನೆಯನ್ನು ಗುರುತಿಸಿ ಈಗಾಗಲೇ ಕಲಾ ಸಂಸ್ಕೃತಿ ಸಾರಥಿ ಪ್ರಶಸ್ತಿ, ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ, ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ, ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳನ್ನು ನೀಡಿ ಸನ್ಮಾನಿಸಲಾಗಿದೆ. ನೂತನ ಪದಾಧಿಕಾರಿಗಳ ನೇಮಕಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.







Comments