ಉಮರ್ ಖಾಲಿದ್ ರಾಷ್ಟ್ರೀಯವಾದಿ ಎಂದ ಹೇಳಿಕೆಗೆ ಹರಿಪ್ರಸಾದ್ ಸಮರ್ಥನೆ; ಆರ್ಎಸ್ಎಸ್ ವಿರುದ್ಧ ವಾಗ್ದಾಳಿ

ಬೆಂಗಳೂರು: ಉಮರ್ ಖಾಲಿದ್ ಅವರನ್ನು ‘ರಾಷ್ಟ್ರೀಯವಾದಿ’ ಎಂದು ಬಣ್ಣಿಸಿದ್ದ ತಮ್ಮ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉಮರ್ ಖಾಲಿದ್ ಕುರಿತು ತಮ್ಮ ಹೇಳಿಕೆಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಯಾವುದೇ ವ್ಯಕ್ತಿಯ ದೇಶಪ್ರೇಮ ಅಥವಾ ದೇಶದ್ರೋಹದ ಬಗ್ಗೆ ತೀರ್ಪು ನೀಡುವ ಅಧಿಕಾರ ರಾಜಕೀಯ ಪಕ್ಷಗಳಿಗೆ ಇಲ್ಲ. ಇಂತಹ ವಿಚಾರಗಳನ್ನು ಸಂವಿಧಾನ ಮತ್ತು ನ್ಯಾಯಾಂಗದ ಚೌಕಟ್ಟಿನಲ್ಲಿ ನೋಡಬೇಕು ಎಂದು ಹೇಳಿದ್ದಾರೆ.
ಉಮರ್ ಖಾಲಿದ್ ಅವರು ಸಂವಿಧಾನ ಅಥವಾ ರಾಷ್ಟ್ರಧ್ವಜದ ವಿರುದ್ಧ ಮಾತನಾಡಿಲ್ಲ. ಜೈಲಿನಲ್ಲಿದ್ದ ಅವಧಿಯಲ್ಲೂ ನ್ಯಾಯಾಲಯದ ವಿರುದ್ಧ ಮಾತನಾಡಿಲ್ಲ, ನ್ಯಾಯಾಂಗದ ಬಗ್ಗೆ ಗೌರವ ಹೊಂದಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.
ಬಿಜೆಪಿ ನಾಯಕರು ಉಮರ್ ಖಾಲಿದ್ ಅವರನ್ನು ದೇಶದ್ರೋಹಿ ಎಂದು ಕರೆಯುತ್ತಿರುವುದನ್ನೂ ಪ್ರಶ್ನಿಸಿದ ಅವರು, ಬಿಜೆಪಿ ಕಚೇರಿ ನ್ಯಾಯಾಲಯವಲ್ಲ. ಯಾರಾದರೂ ದೇಶದ್ರೋಹಿಯಾಗಿದ್ದಾರೆಯೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು ಎಂದು ಹೇಳಿದರು.
ಇದೇ ವೇಳೆ ಆರ್ಎಸ್ಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಸಂವಿಧಾನ, ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಗೆ ವಿರೋಧಿಸುವವರ ವಿರುದ್ಧ ಪ್ರಶ್ನೆ ಎತ್ತಿದರು.
ತಮ್ಮ ಹೇಳಿಕೆ ‘ರಾಷ್ಟ್ರಘಾತುಕ’ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, “ರಾಷ್ಟ್ರದ್ರೋಹಿಗಳೆಲ್ಲಾ ಹಾಗೆಯೇ ಹೇಳುತ್ತಾರೆ” ಎಂದು ತಿರುಗೇಟು ನೀಡಿದರು.







Comments