ಉಡುಪಿ, ದ.ಕ. ಜಿಲ್ಲೆಯಲ್ಲಿ ನಾಳೆ (ಆಗಸ್ಟ್ 25) ಈದ್ ಮಿಲಾದ್ ಸಾರ್ವತ್ರಿಕ ರಜೆ ಘೋಷಣೆ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಈ ಹಿಂದೆ ನಿಗದಿಯಾಗಿದ್ದ ದಿನಾಂಕ 26-08-2026ರ ಬದಲಾಗಿ, ನಾಳೆ ಅಂದರೆ ದಿನಾಂಕ 25-08-2026ರ ಮಂಗಳವಾರದಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಜಿಲ್ಲಾಡಳಿತ ಅಧಿಕೃತ ಆದೇಶ ಹೊರಡಿಸಿದೆ. ನಿರೀಕ್ಷಿತ ಚಂದ್ರ ದರ್ಶನದ ಆಧಾರದ ಮೇಲೆ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 25 ರಂದೇ ಹಬ್ಬವನ್ನು ಆಚರಿಸಲಾಗುತ್ತಿರುವುದರಿಂದ ಸ್ಥಳೀಯ ಮುಸ್ಲಿಂ ಒಕ್ಕೂಟಗಳು ಮತ್ತು ಜಿಲ್ಲಾಧಿಕಾರಿಗಳ ಕೋರಿಕೆಯಂತೆ ಸರ್ಕಾರವು ಈ ಬದಲಾವಣೆಗೆ ಅಸ್ತು ಎಂದಿದೆ.

ಸರ್ಕಾರದ ಆದೇಶದನ್ವಯ ಆಗಸ್ಟ್ 25ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ರಜೆ ಅನ್ವಯವಾಗಲಿದೆ. ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881 ರ ಪ್ರಕಾರ ಈ ರಜೆಯನ್ನು ಸಾರ್ವಜನಿಕ ರಜೆಯೆಂದು ಪರಿಗಣಿಸಲಾಗಿದೆ. ಹಾಗೆಯೇ ಈ ಮುಂಚೆ ರಜೆ ಎಂದು ನಿಗದಿಯಾಗಿದ್ದ ಆಗಸ್ಟ್ 26 ರಂದು ಬುಧವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳು ಯಥಾಪ್ರಕಾರ ಕರ್ತವ್ಯ ನಿರ್ವಹಿಸಲಿವೆ.
ಆದರೆ, ದಿನಾಂಕ 25-08-2026 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ನಡೆಯಲಿರುವ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಪೂರಕ ಪರೀಕ್ಷೆಯ ದ್ವಿತೀಯ ಭಾಷೆ ಇಂಗ್ಲಿಷ್ ಪರೀಕ್ಷೆಯು ಈಗಾಗಲೇ ನಿಗದಿಯಾಗಿರುವಂತೆಯೇ ನಡೆಯಲಿದೆ. ಈ ರಾಜ್ಯ ಮಟ್ಟದ ಪರೀಕ್ಷೆಗೆ ಸಾರ್ವತ್ರಿಕ ರಜೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಡಳಿತವು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.







Comments