ಸುಳ್ಯದಲ್ಲಿ ಧರ್ಮಸ್ಥಳಕ್ಕೆ ಸೇರಿದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ; ವಿಹೆಚ್ಪಿ–ಬಜರಂಗದಳ ಸ್ಥಳ ಪರಿಶೀಲನೆ, ತೆರವು ಕಾರ್ಯಾಚರಣೆ

ಸುಳ್ಯ: ಆಲೆಟ್ಟಿ ಕ್ರಾಸ್ನ ಗುರುಂಪು ಬಳಿ ಧರ್ಮಸ್ಥಳಕ್ಕೆ ಸಂಬಂಧಿಸಿದ ಜಾಗದಲ್ಲಿ ಅನುಮತಿ ಇಲ್ಲದೆ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಗುರುಂಪು ಬಳಿಯ ಸರ್ವೇ ನಂಬರ್ 263-6ರ ಜಾಗದಲ್ಲಿ ಸ್ಥಳೀಯ ಅನ್ಯಮತೀಯ ವ್ಯಕ್ತಿಯೊಬ್ಬರು ಕೆಲವೇ ದಿನಗಳಲ್ಲಿ ಕಟ್ಟಡ ನಿರ್ಮಿಸಿ, ಗೋಡೆ ಹಾಗೂ ಕಬ್ಬಿಣದ ಛಾವಣಿ ಅಳವಡಿಸಿ ಬಾಡಿಗೆಗೆ ನೀಡಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಈ ಕುರಿತು ಧರ್ಮಸ್ಥಳದ ಆಡಳಿತಕ್ಕೆ ಮಾಹಿತಿ ತಲುಪಿದ ಬಳಿಕ, ಕೆಲವು ದಿನಗಳ ಹಿಂದೆ ಧರ್ಮಸ್ಥಳದ ವ್ಯವಸ್ಥಾಪಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಜಾಗದ ಕುರಿತು ವಿಚಾರಣೆ ನಡೆಸಿದ ಬಳಿಕ, ಕಟ್ಟಡ ನಿರ್ಮಾಣ ಮಾಡಿದ್ದ ವ್ಯಕ್ತಿಗೆ ನಿರ್ಮಾಣ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದಾದ ಬಳಿಕ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡದ ಭಾಗಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಜಾಗದ ಗಡಿ ಹಾಗೂ ದಾಖಲೆಗಳ ಕುರಿತು ಮುಂದಿನ ದಿನಗಳಲ್ಲಿ ಸರ್ವೇ ಕಾರ್ಯ ನಡೆಯುವ ಸಾಧ್ಯತೆಯೂ ಇದೆ.

ಈ ನಡುವೆ, ವಿಶ್ವ ಹಿಂದೂ ಪರಿಷತ್–ಬಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷರು, ಕಾರ್ಯದರ್ಶಿ, ಸಹ ಸಂಯೋಜಕರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಾಗದ ಸ್ಥಿತಿ, ನಿರ್ಮಾಣದ ಸ್ವರೂಪ ಹಾಗೂ ಗಡಿ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ. ಸ್ಥಳೀಯರಿಂದಲೂ ಘಟನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಾಯಿತು.
ಕಟ್ಟಡದ ಪಕ್ಕದಲ್ಲಿರುವ ಇತರ ನಿರ್ಮಾಣಗಳೂ ಜಾಗದ ಗಡಿ ವ್ಯಾಪ್ತಿಗೆ ಬರುತ್ತವೆಯೇ ಎಂಬ ಪ್ರಶ್ನೆಯೂ ಸ್ಥಳೀಯರಲ್ಲಿ ಮೂಡಿದೆ. ಈ ಕುರಿತು ಅಧಿಕೃತ ಸರ್ವೇ ಹಾಗೂ ದಾಖಲೆ ಪರಿಶೀಲನೆ ನಡೆದ ಬಳಿಕವೇ ಸ್ಪಷ್ಟತೆ ಸಿಗಬೇಕಿದೆ.
ಸದ್ಯ ಗುರುಂಪು ಬಳಿ ಅಕ್ರಮ ಎಂದು ಆರೋಪಿಸಲಾಗಿರುವ ಕಟ್ಟಡದ ತೆರವು ಕಾರ್ಯಾಚರಣೆ ಮುಂದುವರಿದಿದೆ. ಜಾಗದ ಮಾಲೀಕತ್ವ, ಗಡಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕೃತ ದಾಖಲೆ ಮತ್ತು ಪರಿಶೀಲನೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕಿದೆ.







Comments