ಹಬ್ಬದ ಋತುವಿನಲ್ಲಿ ಸಕ್ಕರೆ ಅಭಾವ ತಡೆಯಲು ಕೇಂದ್ರದ ಕಟ್ಟುನಿಟ್ಟಿನ ಕ್ರಮ: ದಾಸ್ತಾನು ಮಿತಿ ಇಳಿಕೆ

ಹಬ್ಬದ ಸಾಲಿನಲ್ಲಿ ಸಕ್ಕರೆಯ ಕೃತಕ ಅಭಾವ, ಅಕ್ರಮ ದಾಸ್ತಾನು ತಡೆಗಟ್ಟುವುದು ಹಾಗೂ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತಳೆದಿದೆ. ಸಕ್ಕರೆ ವಿತರಕರ ದಾಸ್ತಾನು ಮಿತಿಯನ್ನು 4,000 ಕ್ವಿಂಟಾಲ್ನಿಂದ 2,000 ಕ್ವಿಂಟಾಲ್ಗೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ನೂತನ ನಿಯಮವು ಸೆಪ್ಟೆಂಬರ್ 15 ರಿಂದ ಜಾರಿಗೆ ಬರಲಿದ್ದು, ನವೆಂಬರ್ 30ರವರೆಗೆ ಅನ್ವಯವಾಗಲಿದೆ. ವ್ಯಾಪಾರಿಗಳು ಸಕ್ಕರೆ ಸ್ವೀಕರಿಸಿದ ದಿನದಿಂದ 30 ದಿನಗಳ ಮೀರಿದ ಅವಧಿಗೆ 2,000 ಕ್ವಿಂಟಾಲ್ಗಿಂತ ಹೆಚ್ಚು ದಾಸ್ತಾನು ಹೊಂದುವಂತಿಲ್ಲ.
ಆದರೆ, ಈಶಾನ್ಯ ಮತ್ತು ಪೂರ್ವ ಭಾರತದ ರಾಜ್ಯಗಳಿಗೆ ಸಕ್ಕರೆ ಸರಬರಾಜಿನ ಪ್ರಮುಖ ಕೇಂದ್ರವಾಗಿರುವ ಕೋಲ್ಕತ್ತಾಗೆ ಮಾತ್ರ ಈ ಮಿತಿಯಿಂದ ವಿನಾಯಿತಿ ನೀಡಲಾಗಿದ್ದು, ಅಲ್ಲಿ ಪ್ರಸ್ತುತ ಇರುವ 4,000 ಕ್ವಿಂಟಾಲ್ ದಾಸ್ತಾನು ಮಿತಿಯೇ ಮುಂದುವರಿಯಲಿದೆ.
ದೇಶಾದ್ಯಂತ ಸಕ್ಕರೆ ಕಾರ್ಖಾನೆಗಳು, ಡೀಲರ್ಗಳು ಮತ್ತು ವ್ಯಾಪಾರಿಗಳ ದಾಸ್ತಾನಿನ ಮೇಲೆ ಸರ್ಕಾರ ತೀವ್ರ ನಿಗಾ ಇರಿಸಿದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಪೂರೈಕೆ ಸುಗಮವಾಗಿದ್ದು, ನೈಜ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದಾಗ್ಯೂ, ಯಾರಾದರೂ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯತ್ನಿಸಿದರೆ ಕಾನೂನು ರೀತಿಯ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದ್ದಾರೆ.







Comments