ಅನ್ನಭಾಗ್ಯ ಪಡಿತರ: 75 ವರ್ಷ ಮೇಲ್ಪಟ್ಟ ಹಿರಿಯರಿಗೆ ಬೆರಳಚ್ಚಿನಿಂದ ವಿನಾಯಿತಿ, ಮನೆಬಾಗಿಲಿಗೆ ರೇಷನ್!

ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯುವ ಬಿಪಿಎಲ್ (BPL) ಕಾರ್ಡ್ದಾರರಿಗೆ ಮಹತ್ವದ ಪರಿಹಾರ ನೀಡಲು ಮುಂದಾಗಿದೆ. 75 ವರ್ಷ ಮೇಲ್ಪಟ್ಟ ವಯೋವೃದ್ಧರು, ಅನಾರೋಗ್ಯ ಪೀಡಿತರು ಮತ್ತು ದೈಹಿಕ ಶ್ರಮದಿಂದ ಬೆರಳಚ್ಚು ಸವೆದು ಪಡಿತರ ವಂಚಿತರಾಗುತ್ತಿದ್ದ ಫಲಾನುಭವಿಗಳಿಗೆ ಇನ್ಮುಂದೆ ಬಯೋಮೆಟ್ರಿಕ್ ಬೆರಳಚ್ಚಿನಿಂದ ವಿನಾಯಿತಿ ನೀಡಲಾಗುತ್ತಿದೆ.
ವಯೋಸಹಜವಾಗಿ ಬೆರಳಿನ ರೇಖೆಗಳು ಸವೆದು ಯಂತ್ರದಲ್ಲಿ ಪತ್ತೆಯಾಗದಿರುವುದು ಮತ್ತು ನೆಟ್ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು ಎದುರಿಸುತ್ತಿದ್ದ ತೊಂದರೆಯನ್ನು ತಪ್ಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಕ್ರಮ ಕೈಗೊಂಡಿದೆ. ಇಂತಹ ಅರ್ಹ ಫಲಾನುಭವಿಗಳಿಗೆ ಪರ್ಯಾಯವಾಗಿ ಕಣ್ಣಿನ ಚಹರೆ (ಐರಿಸ್) ಆಧರಿಸಿ ಪಡಿತರ ವಿತರಿಸಲು ಚಿಂತನೆ ನಡೆಸಿದ್ದು, ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಶೇಕಡಾ 2ರಷ್ಟು ಜನರನ್ನು ಈ ವಿನಾಯಿತಿ ಪಟ್ಟಿಗೆ ಸೇರಿಸಲು ಪಟ್ಟಿ ಸಿದ್ಧಪಡಿಸಲಾಗುತ್ತಿದೆ.
ಇದರೊಂದಿಗೆ, 75 ವರ್ಷ ಮೀರಿದ ಒಬ್ಬಂಟಿ ಹಿರಿಯ ನಾಗರಿಕರಿಗೆ ಪಡಿತರವನ್ನು ಮನೆ ಬಾಗಿಲಿಗೇ ತಲುಪಿಸುವ ‘ಅನ್ನ ಸುವಿಧಾ’ ಯೋಜನೆಯನ್ನು ಇನ್ನಷ್ಟು ಸರಳೀಕರಣಗೊಳಿಸಲಾಗುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ‘ಹೋಮ್ ಡೆಲಿವರಿ ಆ್ಯಪ್’ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಿ, ಹಿರಿಯರಿಗೆ ನೆರವಾಗಲು ಸರ್ಕಾರ ನಿರ್ಧರಿಸಿದೆ. ಮನೆಬಾಗಿಲಿಗೆ ಧಾನ್ಯ ತಲುಪಿಸುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ 50 ರೂಪಾಯಿ ಗೌರವಧನ ನೀಡಲಾಗುತ್ತದೆ. ಸರ್ಕಾರದ ಈ ನಿರ್ಧಾರದಿಂದ ವೃದ್ಧರು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವುದು ತಪ್ಪಲಿದ್ದು, ಪಡಿತರ ವಿತರಣೆ ಇನ್ನಷ್ಟು ಸುಲಭವಾಗಲಿದೆ.







Comments