ದರ್ಬೆ ಸೈಬರ್ ಸೆಂಟರ್ ಗಲಾಟೆ ಪ್ರಕರಣ: ಸತ್ಯಾಸತ್ಯತೆ ಬಿಚ್ಚಿಟ್ಟ ಸಂತ್ರಸ್ತ ಮುಬಾಶಿರ; ಕ್ಷಮೆ ಕೇಳಿದರೆ ಕೇಸ್ ವಾಪಸ್ ಪಡೆಯಲು ಸಿದ್ಧ

ಪುತ್ತೂರು / ಮಂಗಳೂರು:
ಪುತ್ತೂರು ನಗರದ ದರ್ಬೆಯ ಸೈಬರ್ ಕೇಂದ್ರವೊಂದರಲ್ಲಿ ಜನನ ಪ್ರಮಾಣಪತ್ರ ಲ್ಯಾಮಿನೇಷನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಪ್ರಕರಣವು ರಾಜಕೀಯ ಹಾಗೂ ಕೋಮು ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಸಂತ್ರಸ್ತ ಮಂಡೆಕೋಲು ನಿವಾಸಿ ಮುಬಾಶಿರ ಅವರು ಮಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಹಾಜರಾಗಿ ಘಟನೆಯ ಪೂರ್ಣ ವಾಸ್ತವಾಂಶವನ್ನು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 21ರಂದು ಊಟಕ್ಕೆ ಬಂದಿದ್ದಾಗ ಪಕ್ಕದ ಸೈಬರ್ ಸೆಂಟರ್ಗೆ ಮಗುವಿನ ಬರ್ತ್ ಸರ್ಟಿಫಿಕೇಟ್ ಲ್ಯಾಮಿನೇಷನ್ ಮತ್ತು ಆಧಾರ್ ಕಾರ್ಡ್ ಪ್ರಿಂಟ್ಗೆ ನೀಡಿದ್ದೆವು. ಆದರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸರ್ಟಿಫಿಕೇಟ್ ಸುಟ್ಟುಹೋಯಿತು. ಸೋಮವಾರ ಪಾಸ್ಪೋರ್ಟ್ ಅಪಾಯಿಂಟ್ಮೆಂಟ್ ಇದ್ದ ಕಾರಣ ಹೊಸ ಸರ್ಟಿಫಿಕೇಟ್ಗೆ ನಷ್ಟ ಪರಿಹಾರವಾಗಿ ₹300 ಕೇಳಿದೆವು. ಆದರೆ ಆಧಾರ್ ಶುಲ್ಕ ಕಳೆದು ₹100 ಕೊಡುವುದಾಗಿ ಒಪ್ಪಿದರೂ, ಮಾಲಕಿಯ ಮಗ ತಮ್ಮ ತಂದೆ-ತಾಯಿಗೆ ಅವಾಚ್ಯವಾಗಿ ಬೈದು ತೀವ್ರ ಹಲ್ಲೆ ನಡೆಸಿದ್ದಾನೆ ಎಂದು ಮುಬಾಶಿರ ವಿವರಿಸಿದರು.
"ನಾವು ಜಗಳ ಮಾಡುವ ಉದ್ದೇಶದಿಂದ ಹೋಗಿರಲಿಲ್ಲ, ಜೊತೆಯಲ್ಲಿ ಸಣ್ಣ ಮಕ್ಕಳಿದ್ದರು. ಮೊದಲು ಹಲ್ಲೆ ಮಾಡಿದ್ದೇ ಅವರು. ಗಾಯಗೊಂಡ ಕಾರಣ ನಾವು ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದೆವು. ನಂತರ ಪೊಲೀಸ್ ಜೀಪಿನ ಬಳಿ ನಡೆದ ಗಲಾಟೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅಲ್ಲಿ ನೆರೆದಿದ್ದವರು ನಮ್ಮ ಸಂಬಂಧಿಕರೂ ಅಲ್ಲ, ಪರಿಚಯಸ್ಥರೂ ಅಲ್ಲ" ಎಂದು ಅವರು ತಿಳಿಸಿದರು.
ಈ ಸಣ್ಣ ಘಟನೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಕೋಮು ಬಣ್ಣ ಕಟ್ಟಲಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, "ನಮಗೆ ಈ ರಾಜಕೀಯದಲ್ಲಿ ಆಸಕ್ತಿಯಿಲ್ಲ. ಹಲ್ಲೆ ನಡೆಸಿದ ಮಾಲಕಿಯ ಮಗ ಬಹಿರಂಗ ಕ್ಷಮೆ ಯಾಚಿಸಿ, ನಮಗಾದ ₹15,000 ಆಸ್ಪತ್ರೆ ವೆಚ್ಚ ಭರಿಸಿದರೆ ಹಾಗೂ ಅವರು ದಾಖಲಿಸಿರುವ ದೂರು ವಾಪಸ್ ಪಡೆದರೆ, ನಾವು ಕೂಡ ಪ್ರಕರಣವನ್ನು ಇಲ್ಲೇ ಮುಕ್ತಾಯಗೊಳಿಸಲು ಸಿದ್ಧರಿದ್ದೇವೆ" ಎಂದು ಹೇಳಿದರು.







Comments