ಬೈಕಂಪಾಡಿ ಎಪಿಎಂಸಿ: ಲೈಂಗಿಕ ಕಿರುಕುಳ ಆರೋಪ, ಅಧಿಕಾರಿ ವಿರುದ್ಧ ‘ಗ್ರೀನ್ ಗ್ಯಾಂಗ್’ ಆಕ್ರೋಶ

ಬೈಕಂಪಾಡಿಯಲ್ಲಿರುವ ಮಂಗಳೂರಿನ ಎಪಿಎಂಸಿ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಲೈಂಗಿಕ ಬೇಡಿಕೆಗೆ ಒಪ್ಪಿದರೆ ವೇತನ ಹೆಚ್ಚಿಸುವುದಾಗಿ ಮತ್ತು ನಿರಾಕರಿಸಿದ್ದಕ್ಕೆ ಕಚೇರಿ ಕೆಲಸದಿಂದ ತೆಗೆದು ಶೌಚಾಲಯ ಶುಚಿಗೊಳಿಸಲು ಹಾಕಿದ್ದರೆಂದು ಕಚೇರಿಯ ಕಾರ್ಯದರ್ಶಿ ಸಿ.ಹೆಚ್. ಮೋಹನ್ ವಿರುದ್ಧ ಸಂತ್ರಸ್ತೆ ದೂರಿದ್ದಾರೆ. ಅಲ್ಲದೆ, ಸಮ್ಮತಿ ಇದ್ದರೆ ಹಸಿರು ಸೀರೆ ಉಟ್ಟು ಬರಬೇಕೆಂದು ಅಧಿಕಾರಿ ಷರತ್ತು ವಿಧಿಸಿದ್ದನೆನ್ನಲಾಗಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ತಂಡ ಹಸಿರು ಸೀರೆ ಧರಿಸಿ ‘ಗ್ರೀನ್ ಗ್ಯಾಂಗ್’ ಆಗಿ ಎಪಿಎಂಸಿ ಕಚೇರಿಗೆ ದಿಢೀರ್ ದಾಳಿ ನಡೆಸಿತು. ತಪ್ಪು ಸಮರ್ಥಿಸಿಕೊಳ್ಳಲು ಯತ್ನಿಸಿದ ಅಧಿಕಾರಿಗೆ ತಪರಾಕಿ ನೀಡಿದ ಮಹಿಳೆಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಬಳಿಕ ಸ್ಥಳಕ್ಕೆ ಬಂದ ಪಣಂಬೂರು పోలీసులు ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಂತ್ರಸ್ತೆಗೆ ಸೂಕ್ತ ರಕ್ಷಣೆ ಸಿಗಬೇಕು ಹಾಗೂ ದೂರು ನೀಡಿದ ಕಾರಣಕ್ಕೆ ಆಕೆಯನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಪ್ರತಿಭಾ ಕುಳಾಯಿ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯಿಂದ ದೂರು ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಪಣಂಬೂರು ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.







Comments