8 ತಿಂಗಳ ಬಳಿಕ ಪತ್ತೆಯಾದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು; ಓರ್ವಳು ಗರ್ಭಿಣಿ!

ಬೆಂಗಳೂರು: ಕಾಲೇಜಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟು ಎಂಟು ತಿಂಗಳಿನಿಂದ ನಾಪತ್ತೆಯಾಗಿದ್ದ ಬೆಂಗಳೂರಿನ ವಿದ್ಯಾರಣ್ಯಪುರದ ಇಬ್ಬರು ವಿದ್ಯಾರ್ಥಿನಿಯರನ್ನು ಕೊನೆಗೂ ಸಿಐಡಿ ಪೊಲೀಸರು ಪತ್ತೆಹಚ್ಚಿದ್ದಾರೆ. ಪ್ರಕರಣದ ತನಿಖೆ ವೇಳೆ ಹೊರಬಂದ ಹಲವು ಅಚ್ಚರಿಯ ಸಂಗತಿಗಳು ಪೊಲೀಸರನ್ನೇ ಬೆಚ್ಚಿಬೀಳಿಸಿವೆ.
ಜನವರಿ 31ರಂದು ಕಾಲೇಜಿಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಇಬ್ಬರು ಯುವತಿಯರು ಬಳಿಕ ಮನೆಗೆ ವಾಪಸ್ ಬಂದಿರಲಿಲ್ಲ. ಮೊಬೈಲ್ ಫೋನ್ ಹಾಗೂ ಎಟಿಎಂ ಕಾರ್ಡ್ ಬಳಕೆ ಮಾಡದ ಹಿನ್ನೆಲೆಯಲ್ಲಿ ಅವರ ಚಲನವಲನದ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗದೆ ತನಿಖೆ ಸವಾಲಾಗಿತ್ತು.
ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಹಲವು ತಿಂಗಳುಗಳ ಕಾಲ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದ ನಿರ್ದೇಶನದ ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.
ಆಧಾರ್ ದೃಢೀಕರಣವೇ ತನಿಖೆಗೆ ಬಿಗ್ ಬ್ರೇಕ್
ಸಿಐಡಿ ತನಿಖೆ ಮುಂದುವರಿದಿದ್ದ ಸಂದರ್ಭದಲ್ಲಿ ತನಿಷ್ಕಾ ಹೊಸ ಸಿಮ್ ಕಾರ್ಡ್ ಪಡೆಯಲು ಮುಂದಾಗಿದ್ದಳು ಎನ್ನಲಾಗಿದೆ. ಈ ವೇಳೆ ನಡೆದ ಆಧಾರ್ ಆಧಾರಿತ ದೃಢೀಕರಣ ಪ್ರಕ್ರಿಯೆ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ನೀಡಿದೆ.
ಇದೇ ವೇಳೆ ತನಿಷ್ಕಾ ಗರ್ಭಿಣಿಯಾಗಿದ್ದು, ಆಸ್ಪತ್ರೆಯಲ್ಲಿ ‘ತಾಯಿ ಕಾರ್ಡ್’ ಮಾಡಿಸುವ ಸಂದರ್ಭದಲ್ಲಿ ಆಧಾರ್ ದೃಢೀಕರಣ ಅಗತ್ಯವಾಗಿತ್ತು ಎನ್ನಲಾಗಿದೆ. ಈ ಪ್ರಕ್ರಿಯೆಯ ಮೂಲಕ ಲಭ್ಯವಾದ ಮಾಹಿತಿಯನ್ನು ಆಧರಿಸಿ ಸಿಐಡಿ ಅಧಿಕಾರಿಗಳು ಯುವತಿಯರಿರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಪರಿಚಯ, ಬಳಿಕ ಮದುವೆ
ತನಿಖೆಯ ಪ್ರಕಾರ, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸಂದರ್ಭದಲ್ಲಿ ತನಿಷ್ಕಾಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು ಎನ್ನಲಾಗಿದೆ. ಬಳಿಕ ಆತನೊಂದಿಗೆ ತೆರಳಿದ್ದ ತನಿಷ್ಕಾ, ಆತನನ್ನು ವಿವಾಹವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನೊಂದಿಗೆ ಇದ್ದ ತೇಜಸ್ವಿನಿಯನ್ನು ತನಿಷ್ಕಾ ತನ್ನ ತಂಗಿ ಎಂದು ಪರಿಚಯಿಸಿದ್ದಳು ಎನ್ನಲಾಗಿದೆ. ನಂತರ ಇಬ್ಬರೂ ಯುವಕನ ಕುಟುಂಬದವರ ಸಂಪರ್ಕದಲ್ಲೇ ವಾಸಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತನಿಷ್ಕಾಳ ಪತಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಹೊಳಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಸ್ವಗ್ರಾಮಕ್ಕೆ ತೆರಳುತ್ತಿದ್ದ ಎಂದು ವಿಚಾರಣೆಯಲ್ಲಿ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.
ಎಂಟು ತಿಂಗಳ ನಿಗೂಢತೆಗೆ ತೆರೆ
ಮೊಬೈಲ್ ಹಾಗೂ ಬ್ಯಾಂಕಿಂಗ್ ವ್ಯವಹಾರಗಳಿಂದ ಯಾವುದೇ ಸುಳಿವು ಸಿಗದಿದ್ದ ಪ್ರಕರಣದಲ್ಲಿ ಕೊನೆಗೆ ಆಧಾರ್ ಆಧಾರಿತ ಡಿಜಿಟಲ್ ದೃಢೀಕರಣವೇ ತನಿಖೆಗೆ ಪ್ರಮುಖ ಬ್ರೇಕ್ ನೀಡಿದೆ.
ಸಿಐಡಿ ಅಧಿಕಾರಿಗಳು ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ತನಿಷ್ಕಾ ಮತ್ತು ತೇಜಸ್ವಿನಿ ಇಬ್ಬರೂ ಪತ್ತೆಯಾಗಿದ್ದಾರೆ.
ಇಬ್ಬರು ಯುವತಿಯರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಸಿಐಡಿ ಪೊಲೀಸರು ಕೈಗೊಂಡಿದ್ದಾರೆ. ಯುವತಿಯರನ್ನು ಹೈಕೋರ್ಟ್ ಮುಂದೆ ಹಾಜರುಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇಬ್ಬರ ಹೇಳಿಕೆ ದಾಖಲಿಸಿಕೊಂಡ ಬಳಿಕ ಅವರು ನಾಪತ್ತೆಯಾದ ದಿನದಿಂದ ಪತ್ತೆಯಾಗುವವರೆಗಿನ ಸಂಪೂರ್ಣ ಬೆಳವಣಿಗೆಗಳ ಕುರಿತು ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.







Comments