ಬೆಂಗಳೂರು-ಮಂಗಳೂರು ನಡುವೆ ನಾಳೆ 'ವಂದೇ ಭಾರತ್' ರೈಲು ಪ್ರಾಯೋಗಿಕ ಸಂಚಾರ: ವೇಳಾಪಟ್ಟಿ ಇಲ್ಲಿದೆ!

ಕರಾವಳಿ ಮತ್ತು ರಾಜಧಾನಿ ನಡುವಿನ ಪ್ರಯಾಣಿಕರ ಬಹುದಿನದ ಕನಸು ನನಸಾಗುವ ಕಾಲ ಹತ್ತಿರವಾಗಿದ್ದು, ಯಶವಂತಪುರ ಮತ್ತು ಮಂಗಳೂರು ಸೆಂಟ್ರಲ್ ನಡುವೆ 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಶನಿವಾರ (ಸೆ.5) ನಡೆಯಲಿದೆ. ಭಾರತೀಯ ರೈಲ್ವೆಯು ಈ ಮಾರ್ಗದಲ್ಲಿ ಚಾಲನಾ ಸಮಯ ಹಾಗೂ ಮಾರ್ಗದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಖಾಲಿ ರೇಕ್ನೊಂದಿಗೆ ಟ್ರಯಲ್ ರನ್ ನಡೆಸುತ್ತಿದೆ.
ಪ್ರಾಯೋಗಿಕ ಸಂಚಾರದ ತಾತ್ಕಾಲಿಕ ವೇಳಾಪಟ್ಟಿ:
* ಯಶವಂತಪುರ ➔ ಮಂಗಳೂರು ಸೆಂಟ್ರಲ್:
* ಯಶವಂತಪುರ ನಿರ್ಗಮನ: ಬೆಳಗ್ಗೆ 06:05
* ಹಾಸನ: ಬೆಳಗ್ಗೆ 09:00 / 09:05
* ಸಕಲೇಶಪುರ: ಬೆಳಗ್ಗೆ 09:95 / 10:00
* ಸುಬ್ರಹ್ಮಣ್ಯ ರೋಡ್: ಮಧ್ಯಾಹ್ನ 12:30 / 12:35
* ಮಂಗಳೂರು ಸೆಂಟ್ರಲ್ ತಲುಪುವ ಸಮಯ: ಮಧ್ಯಾಹ್ನ 02:25
* ಮಂಗಳೂರು ಸೆಂಟ್ರಲ್ ➔ ಯಶವಂತಪುರ:
* ಮಂಗಳೂರು ಸೆಂಟ್ರಲ್ ನಿರ್ಗಮನ: ಮಧ್ಯಾಹ್ನ 03:00
* ಸುಬ್ರಹ್ಮಣ್ಯ ರೋಡ್: ಸಂಜೆ 04:30 / 04:35
* ಸಕಲೇಶಪುರ: ಸಂಜೆ 06:30 / 06:35
* ಹಾಸನ: ರಾತ್ರಿ 07:20 / 07:30
* ಯಶವಂತಪುರ ತಲುಪುವ ಸಮಯ: ರಾತ್ರಿ 11:00
ಘಾಟ್ ಮಾರ್ಗದಲ್ಲಿ 'AEB' ತಂತ್ರಜ್ಞಾನ ಕಡ್ಡಾಯ:
ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಡಿದಾದ ಘಾಟ್ ಪ್ರದೇಶದಲ್ಲಿ ವಂದೇ ಭಾರತ್ ಸಂಚಾರಕ್ಕೆ ಪ್ರಮುಖ ಸವಾಲಾಗಿತ್ತು. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಚಲಿಸುವ ರೈಲುಗಳಿಗೆ ಬ್ಯಾಂಕರ್ (ಹೆಚ್ಚುವರಿ) ಎಂಜಿನ್ ಜೋಡಿಸಲಾಗುತ್ತದೆ. ಆದರೆ ವಂದೇ ಭಾರತ್ ರೈಲಿಗೆ ಬ್ಯಾಂಕರ್ ಎಂಜಿನ್ ಅಳವಡಿಸಬೇಕಾದರೆ ಅದರ ಮುಂಭಾಗದ ನೋಸ್ (Nose) ಭಾಗವನ್ನು ಕಳಚಬೇಕಾಗುತ್ತದೆ. ಇದರಿಂದ ರೈಲಿನ ವೇಗ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ.
ಈ ಸಮಸ್ಯೆಗೆ ಪರಿಹಾರವಾಗಿ, ಕಡಿದಾದ ಇಳಿಜಾರಿನಲ್ಲಿ ಸ್ವಯಂಚಾಲಿತವಾಗಿ ಗರಿಷ್ಠ 30 ಕಿ.ಮೀ ವೇಗವನ್ನು ನಿಯಂತ್ರಿಸುವ ಅತ್ಯಾಧುನಿಕ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆಯುಳ್ಳ ವಿಶೇಷ ರೇಕ್ ಅನ್ನು ಈಗ ನಿಯೋಜಿಸಲಾಗಿದೆ.
ಆಗಸ್ಟ್ 11 ರಿಂದಲೇ ಹಂತ-ಹಂತವಾಗಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದು, ಶನಿವಾರದ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ತಕ್ಷಣವೇ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅಧಿಕೃತ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.







Comments