ಬೆಂಗಳೂರು–ಮಂಗಳೂರು ವಂದೇ ಭಾರತ್: ಪುತ್ತೂರಿನಲ್ಲಿ ನಿಲುಗಡೆಗೆ ಡಾ. ಅರುಣಾ ಶ್ಯಾಮ್ ಮನವಿ

ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಿಸಲಿರುವ 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪುತ್ತೂರು ರೈಲು ನಿಲ್ದಾಣದಲ್ಲಿ ನಿಯಮಿತ ನಿಲುಗಡೆ ಕಲ್ಪಿಸುವಂತೆ ಹಿರಿಯ ವಕೀಲರಾದ ಡಾ. ಅರುಣಾ ಶ್ಯಾಮ್. ಎಂ. ಅವರು ರೈಲ್ವೆ ಮಂಡಳಿಗೆ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 5ರಂದು ಯಶವಂತಪುರ–ಮಂಗಳೂರು ಸೆಂಟ್ರಲ್ ನಡುವೆ ಮತ್ತೊಂದು ಪ್ರಾಯೋಗಿಕ ಸಂಚಾರ ನಿಗದಿಯಾಗಿದ್ದು, ಈ ವೇಳೆಯಲ್ಲೇ ಪುತ್ತೂರಿನಲ್ಲಿ ಪ್ರಾಯೋಗಿಕ ನಿಲುಗಡೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಆಡಳಿತ ಕೇಂದ್ರವಾಗಿದೆ. ಇಲ್ಲಿಂದ ಪ್ರತಿನಿತ್ಯ ಬೆಂಗಳೂರು ಮತ್ತು ಮಂಗಳೂರಿಗೆ ಸಾವಿರಾರು ಪ್ರಯಾಣಿಕರು ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಗಾಗಿ ಸಂಚರಿಸುತ್ತಾರೆ.
ಪ್ರಾಯೋಗಿಕ ಸಂಚಾರದಲ್ಲೇ ನಿಲುಗಡೆ ನೀಡುವುದರಿಂದ ಪ್ರಯಾಣಿಕರ ಸಾಂದ್ರತೆ ಹಾಗೂ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ, ಅಂತಿಮ ವೇಳಾಪಟ್ಟಿ ರೂಪಿಸಲು ಅಧಿಕಾರಿಗಳಿಗೆ ಅನುಕೂಲವಾಗಲಿದೆ. ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ವಾಣಿಜ್ಯ ಸಂಚಾರ ಆರಂಭವಾದಾಗ ಪುತ್ತೂರಿನಲ್ಲಿ ಖಾಯಂ ನಿಲುಗಡೆ ಒದಗಿಸಬೇಕೆಂದು ಅವರು ಕೋರಿದ್ದಾರೆ.







Comments