ದಾವಣಗೆರೆ: ಪತ್ನಿ ಓಡಿಹೋದ ಅವಮಾನ ತಾಳಲಾರದೆ ನವವಿವಾಹಿತ ಹಾಗೂ ಮದುವೆ ಮಾಡಿಸಿದ ಮಾವ ಬಲಿ!
- sathyapathanewsplu
- 5 days ago
- 1 min read

ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ಮದುವೆಯಾದ ಕೇವಲ 45 ದಿನಕ್ಕೆ ಹರೀಶ್ (30) ಎಂಬ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಮೃತ ಹರೀಶ್ ಸಾವಿಗೂ ಮುನ್ನ ಎರಡು ಪುಟಗಳ ಡೆತ್ನೋಟ್ ಬರೆದಿದ್ದು, ಅದರಲ್ಲಿ ತನ್ನ ಪತ್ನಿಯ ಕಿರುಕುಳ ಹಾಗೂ ಆಕೆಯ ವರ್ತನೆಯೇ ಸಾವಿಗೆ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ. ಪತ್ನಿ ಬೇರೆ ಯುವಕನೊಂದಿಗೆ ಓಡಿಹೋಗಿದ್ದಲ್ಲದೆ, ತನ್ನ ಮೇಲೆಯೇ ಸುಳ್ಳು ಆರೋಪಗಳನ್ನು ಮಾಡಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವಬೆದರಿಕೆ ಒಡ್ಡಿದ್ದಳು ಎಂದು ಹರೀಶ್ ಡೆತ್ನೋಟ್ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಹರೀಶ್ ಸಾವಿನ ಬೆನ್ನಲ್ಲೇ, ಈ ಮದುವೆಯನ್ನು ಮುಂದೆ ನಿಂತು ಮಾಡಿಸಿದ್ದ ಯುವತಿಯ ಸೋದರ ಮಾವ ರುದ್ರೇಶ್ ಕೂಡ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರೀಶ್ ಪತ್ನಿ ನಾಲ್ಕು ದಿನಗಳ ಹಿಂದಷ್ಟೇ ಕುಮಾರ್ ಎಂಬಾತನ ಜೊತೆ ಓಡಿಹೋಗಿದ್ದು, ಇದರಿಂದ ತೀವ್ರ ಅವಮಾನ ಅನುಭವಿಸಿದ ರುದ್ರೇಶ್ ಅವರು ಅನೆಕೊಂಡದ ತಮ್ಮ ನಿವಾಸದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತಪ್ಪಾದ ಸಂಬಂಧವನ್ನು ಕೂಡಿಸಿ ಮದುವೆ ಮಾಡಿಸಿದೆ ಎಂಬ ಪಶ್ಚಾತ್ತಾಪ ಹಾಗೂ ಸಮಾಜದಲ್ಲಿ ಎದುರಾದ ಅವಮಾನಕ್ಕೆ ಅವರು ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಡೆತ್ನೋಟ್ನಲ್ಲಿ ಹರೀಶ್ ಅವರು ತನ್ನ ಪತ್ನಿ ಮತ್ತು ಆಕೆಯ ಕುಟುಂಬದವರಿಂದ ಅನುಭವಿಸಿದ ನರಕಯಾತನೆಯನ್ನು ವಿವರಿಸಿದ್ದಾರೆ. "ಆಸ್ತಿಗಿಂತ ಮಾನ ಮುಖ್ಯ, ಪತ್ನಿಯ ಕಡೆಯವರು ನೀಡಿದ ಹಿಂಸೆಯಿಂದಾಗಿ ನನ್ನ ತಂದೆ-ತಾಯಿ ಮನೆ ಬಿಡಲು ಯೋಚಿಸಿದ್ದರು" ಎಂದು ಬರೆದಿರುವ ಅವರು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಪ್ರಸ್ತುತ ದಾವಣಗೆರೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯ ಹುಚ್ಚಾಟದಿಂದ ಎರಡು ಜೀವಗಳು ಬಲಿಯಾದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.






Comments