ಅಶೌಚ ಅವಧಿ ಕಡಿತ: ಕಟೀಲು ನಿರ್ಣಯಕ್ಕೆ ವಿದ್ವಾಂಸರ ಸಮ್ಮತಿ
- sathyapathanewsplu
- Nov 13
- 1 min read
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಭ್ರಾಮರೀವನದಲ್ಲಿ ಭಾನುವಾರ ನಡೆದ ಅಶೌಚ ನಿರ್ಣಯ ಗೋಷ್ಠಿಯಲ್ಲಿ, ಜನನ ಮತ್ತು ಮರಣದ ಸಂದರ್ಭದಲ್ಲಿ ಅನುಸರಿಸಲಾಗುವ 10 ದಿನಗಳ ಅಶೌಚ (ಸೂತಕ) ಅವಧಿಯನ್ನು ಮೂರು ದಿನಗಳಿಗೆ ಮಿತಿಗೊಳಿಸಲು ನಿರ್ಣಯಿಸಲಾಯಿತು. ಈ ನಿರ್ಣಯವು ನಾಲ್ಕರಿಂದ ಏಳು ತಲೆಮಾರುವರೆಗಿನ ಸೂತಕವನ್ನು ಸ್ಮೃತಿ ನಿರ್ದೇಶನದಂತೆ ಈ ಕಾಲಮಾನಕ್ಕೆ ಅನುಗುಣವಾಗಿ ಶಾಸ್ತ್ರದ ಚೌಕಟ್ಟಿನಲ್ಲಿ ಮಾರ್ಪಡಿಸಿದೆ. ದೇಶಾಂತರ ನಿರ್ಣಯ ಮತ್ತು ಸಪಿಂಡಾದಿ ವಿಚಾರಗಳ ಕುರಿತು ಗೋಷ್ಠಿಯಲ್ಲಿ ಚರ್ಚೆ ನಡೆಸಲಾಯಿತು. ಈ ಮಹತ್ವದ ನಿರ್ಧಾರದ ಬಗ್ಗೆ ವಿಮರ್ಶೆ ನಡೆಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.
ವಿದ್ವದ್ಗೋಷ್ಠಿ ಉದ್ಘಾಟಿಸಿದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, "ಯಾವುದನ್ನು ಮಾಡಲಿಕ್ಕೆ ಆಗುವುದಿಲ್ಲವೋ, ಶಾಸ್ತ್ರಗಳು ಅವುಗಳನ್ನು ಹೇಳುವುದಿಲ್ಲ. ಪುರೋಹಿತರು, ದೇವಾಲಯಗಳ ಅರ್ಚಕರು ಅಶೌಚ ನಿಯಮಗಳಿಂದ ಇಂದಿನ ಕಾಲಮಾನದಲ್ಲಿ ಸಮಸ್ಯೆಗೊಳಗಾಗುತ್ತಿರುವುದು ನಿಜ. ಹಾಗಾಗಿ ವಿದ್ವಾಂಸರ ಚರ್ಚೆಗಳೊಂದಿಗೆ ಇದಕ್ಕೆ ಪರಿಹಾರಗಳು ಸಿಗಲಿ," ಎಂದು ಹೇಳಿದರು. ಸಮಾರೋಪದಲ್ಲಿ ಮಾತನಾಡಿದ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿಯವರು, ಸ್ಮೃತಿ ಗ್ರಂಥಗಳು ಅಶೌಚವನ್ನು ಸಂಕುಚಿತಗೊಳಿಸಿದರೂ ದೋಷ, ವಿಸ್ತರಿಸಿದರೂ ದೋಷ ಎಂದು ಎಚ್ಚರಿಸಿವೆ. ಈ ಕಾಲಕ್ಕೆ ಅನುಗುಣವಾಗಿ ಶಾಸ್ತ್ರದ ಚೌಕಟ್ಟಿನಲ್ಲಿ ಮಾರ್ಪಾಡು ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕಟೀಲಿನಲ್ಲಿ ಒಮ್ಮತಕ್ಕೆ ಬಂದು ನಿರ್ಣಯಿಸಿರುವುದು ಸಮಾಧಾನಕರ ಎಂದರು.
ಈ ಗೋಷ್ಠಿಯಲ್ಲಿ ಹೆರ್ಗ ರವೀಂದ್ರ ಭಟ್ ಅವರು ಅಶೌಚ ಪರಿಷ್ಕರಣೆಯ ಅನಿವಾರ್ಯತೆ ಮತ್ತು ಪ್ರಸ್ತುತತೆ ಬಗ್ಗೆ, ವಿದ್ವಾನ್ ಚಂದ್ರಶೇಖರ ಅಡಿಗ ಕೌಂಜೂರು ಅವರು ಅಶೌಚ ಸ್ಮೃತಿಗ್ರಂಥಗಳಲ್ಲಿನ ಅಭಿಪ್ರಾಯ ವ್ಯತ್ಯಾಸಗಳು ಮತ್ತು ಪರಿಹಾರಗಳ ಬಗ್ಗೆ, ಹಾಗೂ ವಿದ್ವಾನ್ ಕುಂಭಾಸಿ ಶ್ರೀಪತಿ ಉಪಾಧ್ಯಾಯ ಅವರು ದೇಶಾಂತರ ನಿರ್ಣಯ, ಅಶೌಚ ವಕೃ ಮತ್ತು ಸಪಿಂಡಾದಿ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾನ್ ಸತ್ಯನಾರಾಯಣ ಆಚಾರ್ಯ ಮತ್ತು ಕಟೀಲು ದೇಗುಲದ ವಾಸುದೇವ ಆಸ್ರಣ್ಣ, ವೇದವ್ಯಾಸ ತಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಅಶೌಚ ನಿಯಮಗಳ ಕುರಿತು ಮಹತ್ವದ ಶಾಸ್ತ್ರೀಯ ಪರಿಷ್ಕರಣೆಗೆ ವೇದಿಕೆ ಕಲ್ಪಿಸಿತು.






Comments