ರಿಕ್ಷಾದಲ್ಲಿ ಗಾಂಜಾ ಮತ್ತು ತಲವಾರು ಸಾಗಾಟ: ಆರೋಪಿ ಚಾಲಕ ಬಂಧನ

ಆಟೋ ರಿಕ್ಷಾದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮತ್ತು ಮಾರಕಾಯುಧವನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಚಾಲಕನೋರ್ವನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ:
ಕಳೆದ ನವೆಂಬರ್ 8 ರಂದು ಮಧ್ಯಾಹ್ನದ ಸಮಯದಲ್ಲಿ, ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಆಟೋ ರಿಕ್ಷಾ ಒಂದರಲ್ಲಿ ಪ್ರಸಾದ್ ಎಂಬಾತ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಲಭಿಸಿತ್ತು.
ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಜನಾರ್ದನ ಕೆ.ಎಂ. ರವರು ತಮ್ಮ ಸಿಬ್ಬಂದಿಗಳೊಂದಿಗೆ ತೆರಳಿ ಸದರಿ ಆಟೋ ರಿಕ್ಷಾವನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ, ರಿಕ್ಷಾದಲ್ಲಿ ಸುಮಾರು 1 ಕೆಜಿಗಿಂತಲೂ ಅಧಿಕ ತೂಕದ ಗಾಂಜಾ ಹಾಗೂ ಮಾರಕಾಯುಧವಾದ ಅಂದಾಜು 25 ಇಂಚು ಉದ್ದದ ತಲವಾರು ಪತ್ತೆಯಾಗಿದೆ.
ಸವಣೂರಿನ ನಿವಾಸಿಯಾಗಿರುವ ಆರೋಪಿ ಪ್ರಸಾದ್ನನ್ನು ಪೊಲೀಸರು ತಕ್ಷಣವೇ ಬಂಧಿಸಿ, ಆಟೋ ರಿಕ್ಷಾ ಮತ್ತು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ದಾಖಲು:
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ [8(c), 20 (ii) (c)] ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ [25(1B) (b)] (ಪ್ರಕರಣ ಸಂಖ್ಯೆ 106/2025) ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.







Comments