ಕೊಲ್ಲಮೊಗ್ರು : ಶೇಂದಿ ಇಳಿಸಲು ತೆಂಗಿನ ಮರವೇರಿದ್ದ ವ್ಯಕ್ತಿ ಮರದಲ್ಲೇ ಮೃತ

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದಲ್ಲಿ ತೆಂಗಿನ ಮರವೇರಿ ಶೇಂದಿ ಇಳಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯೋರ್ವರು ಮರದಲ್ಲೇ ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ.
ಕೊಲ್ಲಮೊಗ್ರು ಸಮೀಪದ ಪನ್ನೆಯಲ್ಲಿ ವ್ಯಕ್ತಿಯೊಬ್ಬರ ಜಾಗದಲ್ಲಿ ಕೇರಳ ಮೂಲದ ಈ ವ್ಯಕ್ತಿಯು ಶೇಂದಿ ಮೂರ್ತೆ (ಶೇಂದಿ ಇಳಿಸುವ ಕಾಯಕ) ನಡೆಸುತ್ತಿದ್ದರು. ಎಂದಿನಂತೆ, ಸೋಮವಾರದಂದು ಕೂಡಾ ಶೇಂದಿ ಇಳಿಸುವ ಸಲುವಾಗಿ ಅವರು ತೆಂಗಿನ ಮರವನ್ನು ಏರಿದ್ದರು.
ಆದರೆ, ಮರದ ಮೇಲೆ ಇರುವಾಗಲೇ ಅವರು ತೀವ್ರ ಅಸ್ವಸ್ಥಗೊಂಡಿದ್ದು, ಸಹಾಯಕ್ಕಾಗಿ ಕೂಗಿಕೊಂಡಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯರು ಮತ್ತು ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಲಾಯಿತು.
ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದಾಗ, ಆ ವ್ಯಕ್ತಿ ಮರದಲ್ಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಸ್ಥಳೀಯರ ಸಹಕಾರದೊಂದಿಗೆ ಮೃತ ದೇಹವನ್ನು ತೆಂಗಿನ ಮರದಿಂದ ಕೆಳಗೆ ಇಳಿಸಲಾಯಿತು.
ಮೃತ ವ್ಯಕ್ತಿಯ ಗುರುತು ಮತ್ತು ಘಟನೆಗೆ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.







Comments