ದೇವಚಳ್ಳದಲ್ಲಿ ಕೋಟಿ ಮೌಲ್ಯದ ಮರದ ದಿಮ್ಮಿಗಳು ವಶ: ಇಬ್ಬರ ಬಂಧನ, ಅಕ್ರಮ ಮರ ಕಡಿತಕ್ಕೆ ಅರಣ್ಯ ಇಲಾಖೆಯಿಂದ ಬ್ರೇಕ್
- sathyapathanewsplu
- Dec 15, 2025
- 1 min read

ದೇವಚಳ್ಳ ಗ್ರಾಮದ ಮುಂಡೋಡಿ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದ್ದ ಅಂದಾಜು ರೂ. 10 ಲಕ್ಷ ಮೌಲ್ಯದ ಮರದ ದಿಮ್ಮಿಗಳನ್ನು ಮತ್ತು ಅವುಗಳ ಸಾಗಾಟಕ್ಕೆ ಬಳಸಿದ ವಾಹನಗಳನ್ನು ಡಿಸೆಂಬರ್ 13 ರಂದು ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಮುಂಡೋಡಿಯ ನಾಗೇಶ್ ಎಂಬುವವರಿಗೆ ಸೇರಿದ ಜಾಗದಿಂದ ಒಂದು ಹೆಬ್ಬಲಸಿನ ಮರ ಮತ್ತು ಒಂದು ಮಾವಿನ ಮರವನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಸೌಮ್ಯಾ ಪಿ. ಎನ್. ಅವರ ನೇತೃತ್ವದಲ್ಲಿ ನೆಲ್ಲೂರು-ಕೆಮ್ರಾಜೆ ವಲಯದ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದರು. ಕಾರ್ಯಾಚರಣೆಯ ಸಮಯದಲ್ಲಿ, ತಂಡವು ಹಲಸು ಮತ್ತು ಮಾವಿನ ಮರದ 10 ದಿಮ್ಮಿಗಳ ಜೊತೆಗೆ ಮರದ ದಿಮ್ಮಿಗಳನ್ನು ಸಾಗಿಸಲು ಬಳಸಿದ ಲಾರಿ ಮತ್ತು ಕ್ರೇನ್ ಅನ್ನು ವಶಪಡಿಸಿಕೊಂಡಿದೆ.
ಸ್ಥಳದ ಮಾಲಕ ನಾಗೇಶ್ ಮತ್ತು ಪ್ರಮುಖ ಆರೋಪಿ ಮರದ ವ್ಯಾಪಾರಿ ಮತ್ತು ಕ್ರೇನ್ ಮಾಲೀಕ, ಸುಳ್ಯ ಕಸಬಾ ನಾವೂರು ನಿವಾಸಿ ಮಹಮ್ಮದ್ ಅಶ್ರಫ್ ಡಿ. ಎಂ. ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಖಚಿತ ಮಾಹಿತಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಅಕ್ರಮವಾಗಿ ಮರ ಕಡಿಯುವ ಮತ್ತು ಸಾಗಾಟವನ್ನು ತಡೆಯುವ ನಿರಂತರ ಪ್ರಯತ್ನದ ಭಾಗವಾಗಿದೆ" ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಎಸ್. ಮರಿಯಪ್ಪ ಅವರ ನಿರ್ದೇಶನದಂತೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.






Comments