ಮಂಗಳೂರು: ಟೊಮೆಟೋ ತಿಂದ ದನದ ಮುಖಕ್ಕೆ ಚೂರಿಯಿಂದ ಇರಿದ ಕಿರಾತಕ; ಆರೋಪಿ ಹಾಗೂ ದನದ ಮಾಲೀಕ ಇಬ್ಬರ ಮೇಲೂ ಕೇಸ್!

ಮಂಗಳೂರಿನ ಎಡಪದವು ಸಮೀಪದ ಪೂಪಾಡಿಕಲ್ಲು ಎಂಬಲ್ಲಿ ಅಯ್ಯಪ್ಪ ಮಾಲಾಧಾರಿಗಳ ಪೂಜಾ ಕಾರ್ಯಕ್ರಮದ ವೇಳೆ ನಡೆದ ಅಮಾನವೀಯ ಘಟನೆಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಾತ್ರೆಯ ಸಂದರ್ಭದಲ್ಲಿ ಚರುಮುರಿ ವ್ಯಾಪಾರ ಮಾಡುತ್ತಿದ್ದ ಉಮರಬ್ಬ ಎಂಬ ವ್ಯಕ್ತಿ, ತನ್ನ ಅಂಗಡಿಯಲ್ಲಿದ್ದ ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಹರಿತವಾದ ಚೂರಿಯಿಂದ ಇರಿದಿದ್ದಾನೆ. ಈ ಕ್ರೂರ ದಾಳಿಯಿಂದಾಗಿ ದನದ ಮುಖಕ್ಕೆ ಆಳವಾದ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ.
ಘಟನೆಯನ್ನು ಗಮನಿಸಿದ ತಕ್ಷಣ ಸ್ಥಳೀಯರು ಗಾಯಗೊಂಡ ದನಕ್ಕೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇತ್ತ ಪ್ರಾಣಿಯ ಮೇಲಿನ ಈ ಕ್ರೌರ್ಯದ ಸುದ್ದಿ ಹರಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬಜರಂಗದಳದ ಮುಖಂಡರು ಸ್ಥಳಕ್ಕೆ ಧಾವಿಸಿ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಪೊಲೀಸ್ ಕಮಿಷನರ್, ಪ್ರಾಣಿ ಹಿಂಸೆ ಮಾಡಿದ ಉಮರಬ್ಬನ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ, ಸಾರ್ವಜನಿಕ ರಸ್ತೆಯಲ್ಲಿ ದನವನ್ನು ಅಜಾಗರೂಕತೆಯಿಂದ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಹಿನ್ನೆಲೆಯಲ್ಲಿ ದನದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.







Comments