ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ 'ಗಿಲ್ಲಿ' ನಟ: ಕಾವೇರಿ ನಿವಾಸದಲ್ಲಿ ಸನ್ಮಾನ

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ನಂತರವೂ 'ಗಿಲ್ಲಿ' ನಟನ ಜನಪ್ರಿಯತೆ ಕುಗ್ಗಿಲ್ಲ. ಹೋದ ಕಡೆಯೆಲ್ಲಾ ಅಭಿಮಾನಿಗಳ ಪ್ರೀತಿ ಹಾಗೂ ಸನ್ಮಾನಗಳಿಗೆ ಪಾತ್ರರಾಗುತ್ತಿರುವ ನಟ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ನಗರದ ಕಾವೇರಿ ನಿವಾಸದಲ್ಲಿ ನಡೆದ ಈ ಭೇಟಿಯಲ್ಲಿ, ಸಿಎಂ ಅವರು ನಟನಿಗೆ ಗಂಧದ ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿದರು.
ನಟನ ಭುಜದ ಮೇಲೆ ಕೈ ಹಾಕಿ ಬೆನ್ನು ತಟ್ಟಿದ ಸಿದ್ದರಾಮಯ್ಯ, ಅವರ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸಿದರು. ಎಂದಿನಂತೆ ಸರಳ ಶರ್ಟ್ ಧರಿಸಿದ್ದ ಗಿಲ್ಲಿ ನಟ ಸಿಎಂ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉಪಸ್ಥಿತರಿದ್ದರು. ಈ ಭೇಟಿಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.







Comments