ಚಿನ್ನದ ದರ ಇಳಿಕೆಗೆ ದೇವಿಗೆ ಮೊರೆ: ಹಗರಿಬೊಮ್ಮನಹಳ್ಳಿಯ ಜಾತ್ರೆಯಲ್ಲಿ ಭಕ್ತನ ವಿಶಿಷ್ಟ ಹರಕೆ!

ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಚಿನ್ನದ ಬೆಲೆಯಿಂದ ಸಾಮಾನ್ಯ ಜನರು ಕಂಗಾಲಾಗಿರುವ ಬೆನ್ನಲ್ಲೇ, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮ್ನಳ್ಳಿ ಗ್ರಾಮದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಗ್ರಾಮದ ಪ್ರಸಿದ್ಧ ಶ್ರೀ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತನೊಬ್ಬ "ಚಿನ್ನದ ಬೆಲೆ ಇಳಿಕೆಯಾಗಲಿ" ಎಂದು ದೇವಿಗೆ ವಿಭಿನ್ನವಾಗಿ ಹರಕೆ ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕೆ. ನಾಗರಾಜ ಉಲವತ್ತಿ ಎಂಬ ಭಕ್ತರು ಈ ವಿಶಿಷ್ಟ ಆಶಯದೊಂದಿಗೆ ದೇವಿಯ ಮೊರೆ ಹೋದವರು. ತಾಯಿಯ ರಥೋತ್ಸವದ ಸಂಭ್ರಮದ ವೇಳೆ ನಾಗರಾಜ ಅವರು ಬಾಳೆಹಣ್ಣಿನ ಮೇಲೆ “ಚಿನ್ನದ ದರ ಇಳಿಯಲಿ, ಮುನಿದ ಚಿನ್ನ ಒಲಿಯಲಿ” ಎಂಬ ಬರಹವನ್ನು ಬರೆದು ದೇವಿಗೆ ಅರ್ಪಿಸಿದರು. ಬಡವರು ಹಾಗೂ ಸಾಮಾನ್ಯ ವರ್ಗದ ಜನರಿಗೂ ಚಿನ್ನ ಖರೀದಿಸಲು ಸಾಧ್ಯವಾಗುವಂತಾಗಲಿ ಎಂಬ ಅವರ ಈ ಸಾಮಾಜಿಕ ಕಳಕಳಿಯ ಭಕ್ತಿ ಪ್ರದರ್ಶನವು ಜಾತ್ರೆಯಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ದೇಶಾದ್ಯಂತ ಚಿನ್ನದ ಬೆಲೆ ಏರಿಕೆಯು ಮದುವೆ ಹಾಗೂ ಶುಭ ಸಮಾರಂಭಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತಿರುವ ಹೊತ್ತಿನಲ್ಲಿ, ಈ ವಿಭಿನ್ನ ಹರಕೆ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ದೇವಿಯ ಕೃಪೆಯಿಂದಲಾದರೂ ಚಿನ್ನದ ಕನಸು ನನಸಾಗಲಿ ಎಂದು ಅನೇಕ ಭಕ್ತರು ನಾಗರಾಜ ಅವರ ಆಶಯಕ್ಕೆ ಧ್ವನಿಗೂಡಿಸಿದರು. ಸಾವಿರಾರು ಭಕ್ತರ ಮಹಾಪೂರವೇ ಹರಿದುಬಂದಿದ್ದ ಚಿಮ್ನಳ್ಳಿ ದುರ್ಗಮ್ಮ ಜಾತ್ರೆಯಲ್ಲಿ ಈ ಘಟನೆಯು ಭಕ್ತಿಯ ಜೊತೆಗೆ ಪ್ರಚಲಿತ ವಿದ್ಯಮಾನವೊಂದಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಯಿತು.







Comments