ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಸರಣಿ ಹತ್ಯೆ: 24 ಗಂಟೆಗಳಲ್ಲಿ ಮೂವರ ಬಲಿ
- sathyapathanewsplu
- Jan 6
- 1 min read

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳು ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಮೂವರು ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ತಾಜಾ ಘಟನೆಯಲ್ಲಿ ನರಸಿಂಗ್ಲಿ ಜಿಲ್ಲೆಯ ದಿನಸಿ ಅಂಗಡಿ ಮಾಲೀಕ ಮೋನಿ ಚಕ್ರವರ್ತಿ ಎಂಬುವವರನ್ನು ಕಿಡಿಗೇಡಿಗಳು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಸೋಮವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಅಂಗಡಿಯಲ್ಲಿದ್ದ ಮೋನಿ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಲಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದಕ್ಕೂ ಕೆಲವು ಗಂಟೆಗಳ ಮೊದಲು ಜಶೋರ್ ಜಿಲ್ಲೆಯಲ್ಲಿ ರಾಣಾ ಪ್ರತಾಪ್ ಎಂಬುವವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ರಾಣಾ ಪ್ರತಾಪ್ ಅವರು ಐಸ್ ಕಾರ್ಖಾನೆ ಮಾಲೀಕರಾಗಿದ್ದಲ್ಲದೆ, ಸ್ಥಳೀಯ ಪತ್ರಿಕೆಯೊಂದರ ಹಂಗಾಮಿ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಕೇಶಬ್ಪುರ ಮೂಲದವರಾದ ಇವರು ಕಳೆದ ಎರಡು ವರ್ಷಗಳಿಂದ ಕೊಪಾಲಿಯಾ ಬಜಾರ್ನಲ್ಲಿ ಕಾರ್ಖಾನೆ ನಡೆಸುತ್ತಿದ್ದರು. ಸೋಮವಾರ ಸಂಜೆ ಬೈಕ್ನಲ್ಲಿ ಬಂದ ಅಪರಿಚಿತರು ಅವರನ್ನು ಕಾರ್ಖಾನೆಯಿಂದ ಹೊರಗೆ ಕರೆದೊಯ್ದು, ವಾಗ್ವಾದ ನಡೆಸಿದ ನಂತರ ತಲೆಗೆ ಗುರಿಯಿಟ್ಟು ಹಲವಾರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರು ಏಳು ಗುಂಡುಗಳನ್ನು ವಶಪಡಿಸಿಕೊಂಡಿದ್ದು, ಪ್ರತಾಪ್ ಅವರ ತಲೆಗೆ ಮೂರು ಬಾರಿ ಗುಂಡು ತಗುಲಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದೇಶದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಮತ್ತು ಅಲ್ಪಸಂಖ್ಯಾತರ ಮೇಲಿನ ಸರಣಿ ದಾಳಿಗಳು ಅಲ್ಲಿನ ಹಿಂದೂ ಸಮುದಾಯದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿವೆ. ಕೇವಲ ಒಂದು ದಿನದ ಅವಧಿಯಲ್ಲಿ ಮೂವರು ಗಣ್ಯ ವ್ಯಕ್ತಿಗಳ ಹತ್ಯೆಯಾಗಿರುವುದು ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.





Comments