ಸಾಮಾಜಿಕ ಬಹಿಷ್ಕಾರ ನಿಷೇಧಕ್ಕೆ ಕರ್ನಾಟಕದಲ್ಲಿ ಕಠಿಣ ಕಾನೂನು
- sathyapathanewsplu
- Dec 12
- 1 min read

ಕರ್ನಾಟಕ ಸರ್ಕಾರವು ವಿಧಾನಸಭೆಯಲ್ಲಿ ಇಂದು ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆಯನ್ನು ಮಂಡಿಸುವ ಮೂಲಕ ಮಹತ್ವದ ಐತಿಹಾಸಿಕ ಹೆಜ್ಜೆಯಿಟ್ಟಿದೆ. ಈ ಮಸೂದೆಯ ಮುಖ್ಯ ಉದ್ದೇಶವು ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿದೆ. ಈ ಹೊಸ ಕಾನೂನಿನ ಅನ್ವಯ, ಯಾರಾದರೂ ಸಾಮಾಜಿಕ ಬಹಿಷ್ಕಾರದಂತಹ ಕೃತ್ಯಕ್ಕೆ ಮುಂದಾದರೆ, ಅವರಿಗೆ 1 ಲಕ್ಷ ರೂ.ಗಳ ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಬಹಿಷ್ಕಾರ ಹಾಕಲು ಸಭೆ-ಪಂಚಾಯಿತಿ ನಡೆಸುವುದು, ಅದಕ್ಕೆ ಸಹಾಯ ಅಥವಾ ಪ್ರಚೋದನೆ ನೀಡುವುದು ಸಹ ಶಿಕ್ಷಾರ್ಹ ಅಪರಾಧಗಳೆಂದು ಪರಿಗಣಿಸಲಾಗುತ್ತದೆ.
ಈ ಮಸೂದೆಯು ಬಹಿಷ್ಕಾರಕ್ಕೆ ಕಾರಣರಾದವರನ್ನು ಕಠಿಣವಾಗಿ ನಿರ್ಧರಿಸುತ್ತದೆ. ಬಹಿಷ್ಕಾರಕ್ಕೆ ಒತ್ತಡ ಹೇರಿದವರು, ಅದರ ಪರವಾಗಿ ಮತ ಚಲಾಯಿಸಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಗ್ರಾಮ ಅಥವಾ ಸಮುದಾಯದಿಂದ ಹೊರಹಾಕುವುದು, ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ, ಪೂಜಾ ಸ್ಥಳಗಳಿಗೆ ಅಥವಾ ಶಾಲೆ, ಆಸ್ಪತ್ರೆಗಳ ಪ್ರವೇಶಕ್ಕೆ ಅಡ್ಡಿಪಡಿಸುವುದು, ಸಾಮಾಜಿಕ-ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು, ಹಾಗೂ ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧ ಸೇರಿದಂತೆ ಹಲವಾರು ರೀತಿಯ ಸಾಮಾಜಿಕ ನಿರ್ಬಂಧಗಳನ್ನು ಈ ಮಸೂದೆಯು ನಿಷೇಧಿಸಿದೆ. ಲಿಂಗತ್ವ, ವರ್ಣ, ಬಟ್ಟೆ, ಭಾಷೆ ಮತ್ತು ಸಾಂಸ್ಕೃತಿಕ ಭೇದ ಎಸಗುವುದನ್ನೂ ಸಹ ಮಾನವ ಹಕ್ಕುಗಳ ನಿರಾಕರಣೆಯೆಂದು ಪರಿಗಣಿಸಿ ನಿಷೇಧಿಸಲಾಗಿದೆ.
ಪೀಡಿತರಿಗೆ ತ್ವರಿತ ನ್ಯಾಯ ಮತ್ತು ಪರಿಹಾರವನ್ನು ಒದಗಿಸಲು ಮಸೂದೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರು ನೇರವಾಗಿ ಪೊಲೀಸ್ ಠಾಣೆ ಅಥವಾ ಪ್ರಥಮ ದರ್ಜೆ ನ್ಯಾಯಾಧೀಶರಿಗೆ ದೂರು ಸಲ್ಲಿಸಬಹುದು. ನ್ಯಾಯಾಧೀಶರಿಗೆ ನೇರವಾಗಿ ಸಲ್ಲಿಕೆಯಾದ ದೂರಿನ ತನಿಖೆ ನಡೆಸಲು ಆದೇಶಿಸುವ, ಪೀಡಿತರಿಗೆ ಸಹಾಯ ಒದಗಿಸಲು ಸೂಚಿಸುವ ಮತ್ತು ವಿಧಿಸಿದ ದಂಡದ ಮೊತ್ತವನ್ನು ಪೀಡಿತರಿಗೆ ಪರಿಹಾರವಾಗಿ ನೀಡಲು ನಿರ್ದೇಶಿಸುವ ಅಧಿಕಾರವನ್ನು ನೀಡಲಾಗಿದೆ. ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಡಿಸಿಗಳಿಗೂ ಅಧಿಕಾರವನ್ನು ನೀಡಲಾಗಿದ್ದು, ಸಾಮಾಜಿಕ ಬಹಿಷ್ಕಾರ ತಡೆಗಟ್ಟಲು ವಿಶೇಷ ಅಧಿಕಾರಿಗಳನ್ನು ಸಹ ನಿಯೋಜಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.






Comments